<?xml version="1.0" encoding="UTF-8"?><!-- generator="wordpress.com" -->
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	>

<channel>
	<title>ಮೈಸೂರಿನಿಂದ-ಅಂಕಣ &amp;laquo; WordPress.com Tag Feed</title>
	<link>http://wordpress.com/tag/ಮೈಸೂರಿನಿಂದ-ಅಂಕಣ/</link>
	<description>Feed of posts on WordPress.com tagged "ಮೈಸೂರಿನಿಂದ-ಅಂಕಣ"</description>
	<pubDate>Sun, 06 Jul 2008 14:06:33 +0000</pubDate>

	<generator>http://wordpress.com/tags/</generator>
	<language>en</language>

<item>
<title><![CDATA[ನಾಳೆಯಿಂದ ಒಂದು ಹೊಸ ಹೂವಿನ ಹೆಸರು]]></title>
<link>http://mysorepost.wordpress.com/2007/12/31/%e0%b2%a8%e0%b2%be%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%92%e0%b2%82%e0%b2%a6%e0%b3%81-%e0%b2%b9%e0%b3%8a%e0%b2%b8-%e0%b2%b9%e0%b3%82%e0%b2%b5%e0%b2%bf%e0%b2%a8-%e0%b2%b9/</link>
<pubDate>Mon, 31 Dec 2007 08:37:10 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/12/31/%e0%b2%a8%e0%b2%be%e0%b2%b3%e0%b3%86%e0%b2%af%e0%b2%bf%e0%b2%82%e0%b2%a6-%e0%b2%92%e0%b2%82%e0%b2%a6%e0%b3%81-%e0%b2%b9%e0%b3%8a%e0%b2%b8-%e0%b2%b9%e0%b3%82%e0%b2%b5%e0%b2%bf%e0%b2%a8-%e0%b2%b9/</guid>
<description><![CDATA[ಪ್ರಿಯರೇ, 
ಈ ತನಕದ ಹುಡುಗಾಟ, ಆಲಸ್ಯ, ಸುಖಾಸು]]></description>
<content:encoded><![CDATA[<p><img align="left" src="http://mysorepost.wordpress.com/files/2007/12/logo-21.jpg" alt="logo-21.jpg" />ಪ್ರಿಯರೇ, </p>
<p>ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.</p>
<p>ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.</p>
<p>- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.</p>
<p>ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.</p>
<p>ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..</p>
<p>ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.</p>
<p>ಅದರ ಒಂದು ತುಣುಕು ನಾಳೆಯಿಂದ ನಿಮ್ಮ ಕಣ್ಣಿಗೆ ಕಾಣಿಸಲಿದೆ.</p>
<p>ದೊಡ್ಡ ಯೋಚನೆಯೊಂದರ ಕಾಲುದಾರಿ.</p>
<p>ಎತ್ತರದ ಹೂವೊಂದರ ಸಣ್ಣ ಪರಿಮಳ</p>
<p>ಒಂದು ಪುಟ್ಟ ಹೆಜ್ಜೆ</p>
<p>ಇಂದು ನಡುರಾತ್ರಿಗೆ ಮೊದಲೇ ಆ ಹೂವಿನ ಹೆಸರಿನ ವಿಳಾಸ ತಿಳಿಸುತ್ತೇನೆ.</p>
<p>ನಡುರಾತ್ರಿಯ ನಂತರ ನೀವು ಆ ಹೂವನ್ನ ಕಾಣುವಿರಿ.</p>
<p>ಕಳೆಯುತ್ತಿರುವ ವರ್ಷದ ಕಡೆಯ ಗಳಿಗೆಗಳು..</p>
<p>ಹೊಸ ವರ್ಷದ ಹೊಸ ನಿಮಿಷಗಳು..</p>
<p>ಕಾಯುತ್ತೀರಾ?</p>
<p>-ಅಬ್ದುಲ್ ರಶೀದ್.</p>
]]></content:encoded>
</item>
<item>
<title><![CDATA[ನೂರಾ ಐದು ವರ್ಷಗಳನ್ನು ಕಂಡು ತೀರಿಹೋದರು ರಾಮಣ್ಣ]]></title>
<link>http://mysorepost.wordpress.com/2007/10/24/%e0%b2%85%e0%b2%a0%e0%b2%be%e0%b2%a3%e0%b2%be-%e0%b2%b0%e0%b2%be%e0%b2%ae%e0%b2%a3%e0%b3%8d%e0%b2%a3/</link>
<pubDate>Wed, 24 Oct 2007 13:55:00 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/10/24/%e0%b2%85%e0%b2%a0%e0%b2%be%e0%b2%a3%e0%b2%be-%e0%b2%b0%e0%b2%be%e0%b2%ae%e0%b2%a3%e0%b3%8d%e0%b2%a3/</guid>
<description><![CDATA[ 

ಕುವೆಂಪು ಅವರಿಗೂ ಸೀನಿಯರ್ ಆಗಿದ್ದ ಹಾಸನ ]]></description>
<content:encoded><![CDATA[<p align="left"> </p>
<p style="text-align:center;" align="left"><img src="http://mysorepost.wordpress.com/files/2007/02/ramanna1.jpg" alt="ramanna1.jpg" /></p>
<p align="left">ಕುವೆಂಪು ಅವರಿಗೂ ಸೀನಿಯರ್ ಆಗಿದ್ದ ಹಾಸನ ಅಠಾಣಾ ರಾಮಣ್ಣನವರು ೧೦೫ ವರ್ಷ ಬದುಕಿ ನಿನ್ನೆ ರಾತ್ರಿ ಮೈಸೂರಿನಲ್ಲಿ ತೀರಿಹೋದರು.</p>
<p style="text-align:center;" align="left"><img src="http://mysorepost.wordpress.com/files/2007/02/ramanna-4.jpg" alt="ramanna-4.jpg" /></p>
<p align="left"> ಅವರ ಕುರಿತು <a href="http://mysorepost.wordpress.com/2007/02/20/athana-ramanna/" title="ಅಠಾಣಾ ರಾಮಣ್ಣ" target="_blank">ಈ ಹಿಂದೆ ಬರೆದ ಬರಹಕ್ಕಾಗಿ </a>ಇಲ್ಲಿ ಓದಿ</p>
]]></content:encoded>
</item>
<item>
<title><![CDATA[ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆ]]></title>
<link>http://mysorepost.wordpress.com/2007/05/28/yogacharya-nagaraja-sooryanaarayana-pande/</link>
<pubDate>Mon, 28 May 2007 17:43:12 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/05/28/yogacharya-nagaraja-sooryanaarayana-pande/</guid>
<description><![CDATA[ 
ನಿನ್ನೆ ಸಂಜೆ ಮೈಸೂರಿನಲ್ಲಿ ಇನ್ನೇನು ಮಳೆ]]></description>
<content:encoded><![CDATA[<p> <img src="http://mysorepost.files.wordpress.com/2007/05/nagaraja-pandey.jpg" alt="nagaraja-pandey.jpg" /></p>
<p>ನಿನ್ನೆ ಸಂಜೆ ಮೈಸೂರಿನಲ್ಲಿ ಇನ್ನೇನು ಮಳೆ ಸುರಿಯುವ ಹಾಗೆ ಇತ್ತು. ಆದರೆ ಹಾಗೇನೂ ಆಗಲಿಲ್ಲ.  ನಾನು ಸುಮಾರು ಎರಡು ಗಂಟೆಗಳ ಹೊತ್ತು ಯೋಗಾಚಾರ್ಯ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಬಳಿ ಕಥೆ ಕೇಳುತ್ತಾ ಕುಳಿತಿದ್ದೆ.  ಒಂದಂತೂ ನಿಜ.  ಇನ್ನು ನೂರಾರು ವರ್ಷಗಳಷ್ಟು ಕಾಲ ಬರೆಯುವಷ್ಟು ವಿಷಯಗಳು ಅವರ ಬಳಿ ಇರುವುದು ಗೊತ್ತಾಯಿತು. ನನಗೆ ಮೈಸೂರಿನಲ್ಲಿ ಮಾತನಾಡಲು, ನನ್ನನ್ನು ಹರಸಲು ಇನ್ನೊಬ್ಬರು ಮಹಾ ಗುರುಗಳು ದೊರಕಿದರು ಎಂಬ ಆನಂದದಿಂದ ಅವರ ಬಳಿಯಿಂದ ಹೊರಟು ಬಂದು ಇದನ್ನು ಬರೆಯುತ್ತಿರುವೆ</p>
<p> ನಾಗರಾಜ ಸೂರ್ಜನಾರಾಯಣ ಪಾಂಡೆಯವರು ನನಗೆ ಮೊದಲು ಪರಿಚಯವಾಗಿದ್ದು ಸುಮಾರು ಆರು ತಿಂಗಳುಗಳ ಹಿಂದೆ ಆಕಸ್ಮಿಕವಾಗಿ. ಹಳೆಯಕಾಲದ ಕೀ ಕೊಡುವ ಕೈಗಡಿಯಾರಗಳನ್ನು ಸರಿಪಡಿಸುವ ತಜ್ಞರು ಯಾರಾದರೂ ಇದ್ದಾರೆಯೇ ಎಂದು ಮೈಸೂರಿನ ಮಕ್ಕಾಜಿ ಚೌಕದ ಬಳಿಯಿರುವ ಒಲಂಪಿಯಾ ಥಿಯೇಟರಿನ ಅಕ್ಕ ಪಕ್ಕ ಹುಡುಕುತ್ತಿದ್ದೆ ಆಗ ಯಾರೋ ಪಾಂಡಯವರ ಹೆಸರು ಹೇಳಿದರು.  ಹೋಗಿ ನೋಡಿದರೆ ಆ ಹಳೆಯ ಗಡಿಯಾರದ ಅಂಗಡಿಯಲ್ಲಿ ಪಾಂಡೆಯವರ ಪುತ್ರ ಇದ್ದರು.  ಪಾಂಡೆಯವರು ಈಗ ಗಡಿಯಾರಗಳ ಗೊಡವೆಗೆ ಹೋಗುವುದಿಲ್ಲವೆಂದೂ ಈಗ ಅವರು ಪತಂಜಲೀ ಯೋಗವನ್ನು ಅರ್ಹರಿಗೆ ಹೇಳಿಕೊಡುತ್ತಿದ್ದಾರೆಂದೂ ಗೊತ್ತಾಯಿತು.  ದೂರವಾಣಿಯಲ್ಲಿ ಪಾಂಡೆಯವರನ್ನು ಮಾತನಾಡಿಸಿ 'ಏನು ಪಾಂಡೆಯವರೇ ಗಡಿಯಾರದ ಸಹವಾಸ ತೊರೆದು ಯೋಗಾಚಾರ್ಯರಾಗಿದ್ದೀರಲ್ಲಾ..?' ಎಂದು ಕೇಳಿದೆ 'ಈಗ ಯೋಗದ ಮೂಲಕ ಕಾಲವನ್ನು ಅಳೆಯುತ್ತಿದ್ದೇನೆ' ಎಂದು ತೀರಾ ಅಪರೂಪದ, ಆಳದ ಧ್ವನಿಯಲ್ಲಿ ಹೇಳಿದರು. ಅವರ ಧ್ವನಿ ಕೇಳಿದರೇ ಪುಳಕಿತವಾಗುವ ಹಾಗೆ ಇತ್ತು.  ಆಮೇಲೆ ಅವರ ಜೊತೆ ರಾಜಯೋಗದ ಕುರಿತು, ಪತಂಜಲಿಯ ಕುರಿತು ಕೇಳಿದೆ. ಅವರ ಜೊತೆ ಮಾತನಾಡುತ್ತಾ ಈ ಮನುಷ್ಯ ಬಹಳ ದೊಡ್ಡವರು ಅನಿಸಿತು. ಹುಡುಗನಾಗಿರುವಾಗ ಬಹಳ ಕಷ್ಟಪಟ್ಟಿದ್ದಾರೆ ಅನಿಸಿತು.<!--more--></p>
<p> ಯೋಗದ ಜೊತೆಗೆ ಕಾವ್ಯ, ಗಡಿಯಾರದ ಜೊತೆಗೆ ಭಗವಂತ, ಹಸಿವಿನ ಜೊತೆ ಆದ್ಯಾತ್ಮ, ಕಾಮದ ಜೊತೆ ಏಕಾಂಗಿತನ, ಹಷೀಸಿನ ಜೊತೆ ಆತ್ಮಹತ್ಯೆ, ಆತ್ಮ ಸಾಕ್ಷಾತ್ಕಾರದ ಜೊತೆ ಒಲವು ಎಲ್ಲವನ್ನು ಬಲ್ಲವರಾಗಿದ್ದಾರೆ ಅನಿಸಿತು. ಅದಕ್ಕಾಗಿ ನಿನ್ನ ಪುನಃ ಅವರ ಜೊತೆ ಇನ್ನಷ್ಟು ಮಾತನಾಡಿಸಿದೆ. ಅವರ ಕಥೆ, ಕಾವ್ಯ, ಹಾಡು, ಆಧ್ಯಾತ್ಮ, ಹಸಿವು, ಏಕಾಂಗಿತನ ಮತ್ತು ಎಡೆಬಿಡದ ಅಲೆದಾಟ- ಎಲ್ಲವನ್ನೂ ಕೇಳಿಸಿಕೊಂಡು ಸಖತ್ ಸುಸ್ತಾಗಿ ಹೋದೆ.  ಅದೊಂದು ತರಹದ ಸೋಲಿನ ಸುಸ್ತು.  ಜ್ಞಾನಿಯ ಎದುರಲ್ಲಿ ಸೋಲುವ ಪ್ರಣಯಿಯ ಹಾಗೆ.  ಅವರೂ ನನ್ನ ವಯಸಿನಲ್ಲಿ ಇಂತಹ ಹಲವು ಸೋಲುಗಳನ್ನು ಕಂಡಿರುವರು ಅನಿಸಿತು. ಬರುವಾಗ ಕೈಮುಗಿದೆ.  'ನಿಮ್ಮನ್ನು ನಾನು ಕಂಡಿದ್ದು ಒಂದು ತರಹದ ವಿಧಿಲಿಖಿತದ ಹಾಗಿದೆ. ಇನ್ನೇನೆಲ್ಲಾ ಆಗಲಿಕ್ಕಿದೆಯೋ' ಅಂದೆ.</p>
<p> 'ಇದು ನನ್ನ ಅಹಂಕಾರದ ಮಾತಲ್ಲ. ನಿನಗೆ ನೂರು ವರುಷಗಳಷ್ಟು ಕಾಲ ಹೇಳಬಲ್ಲ ಕಥೆಗಳು<br />
 ನನ್ನ ಬಳಿ ಇದೆ.  ನನ್ನನ್ನು ಸ್ವೀಕರಿಸು' ಎಂದು ಅವರು ಅಂದರು 'ಅಹುದಹುದು' ಎಂದು<br />
 ಅಲ್ಲಿಂದ ಹೊರಟು ಬಂದೆ.</p>
<p align="left"><img align="right" src="http://mysorepost.files.wordpress.com/2007/05/pande2.jpg" alt="pande2.jpg" /></p>
<p> ಪಾಂಡೆಯವರು ಕನ್ಯಾಕುಬ್ಜ ಎಂಬ ವೈದಿಕ ಜನಾಂಗಕ್ಕೆ ಸೇರಿದವರು. ಬಿಹಾರ ಮತ್ತು ಉತ್ತರ ಪ್ರದೇಶದ ನಡುವಿನ ಕನೌಜ್ ಪ್ರದೇಶದವರು.  ಪಾಠಕ್, ತ್ರಿವೇಧಿ ದ್ವಿವೇಧಿ, ಶುಕ್ಲ, ಪಾಂಡೆ, ವಾಜಪೇಯಿ ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಜನಾಂಗದವರು ಈಗಲೂ ಅಲ್ಲಿ ಜೀವಿಸುತ್ತಿದ್ದಾರೆ.  ಹದಿನೆಂಟನೆಯ ಶತಮಾನದಲ್ಲಿ ಔರಂಗಜೇಬನ ಕಾಟವನ್ನು ತಡೆಯಲಾರದೆ ಇವರ ಹಿರಿಯರಲ್ಲಿ ಹಲವರು ಆಗಲೇ ಸಾಮೂಹಿಕವಾಗಿ ಚಿತೆಗೆ ಏರಿದ್ದಾರೆ.  ಉಳಿದವರಲ್ಲಿ ಹಲವರು ಭೂಮಿಕಾಣಿಗಳನ್ನು ಮಾರಿ, ಕುದುರೆಯೇರಿ, ಕತ್ತೆಗಳ ಮೇಲೆ ಚಿನ್ನಾಬರಣಗಳನ್ನು ಹೊರೆಸಿಕೊಂಡು, ಹಲವೆಡೆ ಚೆಲ್ಲಾಪಿಲ್ಲಿಯಾಗಿದ್ದಾರೆ.</p>
<p> ನಾಗರಾಜ ಪಾಂಡೆಯವರ ಪೂರ್ವಜ ಕಲ್ಯಾಣ ಪಾಂಡೆ ಎಂಬವರು ಹದಿನೆಂಟನೆಯ ಶತಮಾನದಲ್ಲಿ ಶಿವಮೊಗ್ಗದ ಬಳಿಯ ಕುಂಸಿಗೆ ಬಂದು ನೆಲಸಿದ್ದಾರೆ. ಮನೆ ದೇವರು ವೈಷ್ಣೋದೇವಿಯನ್ನು ಅಗಲಿ ಧರ್ಮಸ್ಥಳದ ಮಂಜುನಾಥನನ್ನು ಹೊಸ ಮನೆ ದೇವರೆಂದು ಒಪ್ಪಿಕೊಂಡಿದ್ದಾರೆ.  ಅವರ ಮಗ ರಘುನಾಥ ಪಾಂಡೆ ಮೈಸೂರು ಮಹಾರಾಜರ ಅನುಮತಿಯಿಂದ ಕುಂಸಿಯಲ್ಲಿ ಒಂದು ಕೋಟೆ ಕಟ್ಟಿಸಿ,ಅದರ ಸುತ್ತ ಕಾಲುವೆ ಹರಿಸಿ, ಅದರೊಳಗಡೆ ಏಳು ಅಂತಸ್ತಿನ ಮಣ್ಣಿನ ಅರಮನೆಯನ್ನು ನಿಮರ್ಿಸಿದ್ದಾರೆ.  ಕಾಲಾಂತರದಲ್ಲಿ ಅಂದರೆ ನಾಗರಾಜ ಪಾಂಡೆಯವರ ತಾತ ಶಿವರಾಮ ಪಾಂಡೆಯವರ ಕಾಲದಲ್ಲಿ ಯಾವುದೋ ಅಹಮ್ಮಿನ ಕಾರಣದಿಂದ ಆ ಮನೆ ಪಾಲಾಗಿದೆ.  ಒಂದು ಆಷಾಡ ಶುಕ್ರವಾರ ಅಣ್ಣತಮ್ಮಂದಿರು ಜಗಳವಾಡಿ ಆ ಮಣ್ಣಿನ ಅರಮನೆ ಭಾಗವಾಗಿ ಚಿನ್ನದ ವರಹಗಳನ್ನು ಕೊಳಗದಲ್ಲಿ ವಿಂಗಡಿಸಿ ಹಂಚಿಕೊಂಡು ಜೂಜಿನಲ್ಲಿ ಅದನ್ನೂ ಕಳೆದುಕೋಂಡಿದ್ದಾರೆ. 1963ರಲ್ಲಿ ಎಂಬತ್ತ ಮೂರು ಏಕರೆಗಳಷ್ಟು ಇದ್ದ ಅವರ ಸಾಮ್ರಾಜ್ಯ 1976ರ ದೇವರಾಜ ಅರಸರ ಭೂ ಮಸೂದೆಯ ಹೊತ್ತಿಗೆ ಸೊನ್ನೆಯಾಗಿದೆ. ಅವರು ಹತ್ತಿರ ಹತ್ತಿರ ಬಿಕಾರಿಗಳಾಗಿದ್ದಾರೆ.  1947ರಲ್ಲಿ ಹುಟ್ಟಿದ ನಾಗರಾಜ ಪಾಂಡೆಯವರು 1951ರಲ್ಲಿ ತಾಯಿಯನ್ನು ಕಳೆದುಕೊಂಡಿದ್ದಾರೆ. </p>
<p>  ಪಾಂಡೆಯವರ ತಂದೆ ಸೂರ್ಯನಾರಾಯಣ ಪಾಂಡೆಯವರು ಎರಡನೇ ವಿಶ್ವಯುದ್ಧದಲ್ಲಿ ಬ್ರಿಟಿಷರ ಪರವಾಗಿ ಜರ್ಮನ್ ನಾಝಿಗಳ ಎದುರು ಫ್ರಾನ್ಸ್ ಇಂಗ್ಲೆಂಡ್ಗಳಲ್ಲಿ ಹೋರಾಡಿ ಕಾಲಿಗೆ ಏಟು ಮಾಡಿಕೊಂಡು ಬಂದಿದ್ದಾರೆ.  ಹೆಂಡತಿ ತೀರಿಹೋದಾಗ ಏಕಾಂಗಿಯಾಗಿ ಆಳುಗಳ ಸಹಾಯದಿಂದ ಅವರ ಅಂತ್ಯಕ್ರಿಯೆಯನ್ನು ಅಮಾನುಷವಾಗಿ ಮುಗಿಸಿದ್ದಾರೆ. ಹೆಂಡತಿ ತೀರಿ ಹೋದ ಮೂರು ತಿಂಗಳಲ್ಲೇ ಹೊಸಬಿ ಹೆಂಡತಿಯನ್ನು ಮದುವೆಯಾಗಿದ್ದಾರೆ. ನಾಗರಾಜ ಪಾಂಡೆಯವರ ಹಾಲುಗಲ್ಲದ ಇಬ್ಬರು ತಮ್ಮಂದಿರೂ ದೊಡ್ಡವರ ನಿರ್ಲಕ್ಷದಿಂದ ಹೊಟ್ಟೆಗಿಲ್ಲದೆ ತೀರಿಹೋಗಿದ್ದಾರೆ.  ನಾಲ್ಕು ವರ್ಷದ ಹುಡುಗನಾಗಿದ್ದ ನಾಗರಾಜ ಪಾಂಡೆ ಕೇವಲ ತನ್ನ ಆತ್ಮಬಲದಿಂದ ಬದುಕಿ ಉಳಿದಿದ್ದಾರೆ.  ಆ ವಯಸಿನಲ್ಲೇ ಆ ಬಾಲಕನಿಗೆ ದೇವರ ಮೇಲೆ ನಂಬಿಕೆ ಹೊರಟು ಹೋಗಿದೆ.  ಶಿವಮೊಗ್ಗದ ಡಿ.ವಿ.ಎಸ್. ಶಾಲೆಯ ಒಂದು ಕಣ್ಣಿನ ಮೇಷ್ಟ್ರು ಅಳಸಿಂಗಾಚಾರರಿಂದ ಹೆದರಿಕೊಂಡು ಪಾಠ ಹೇಳಿಸಿಕೊಂಡಿದ್ದಾರೆ.  ಇನ್ನೊಬ್ಬರು ಗಣಿತದ ಮೇಷ್ಟ್ರು ಅವರಿಗೆ ಗಣಿತ ಹೇಳುವ ಬದಲು ಕಥೆಗಳನ್ನು ಹೇಳಿ ಬದುಕಿಸಿದ್ದಾರೆ.  ಡಿ.ವಿ.ಎಸ್. ಶಾಲೆಯಲ್ಲಿ ಯಾರೋ ಸರ್ಕಸ್ಸಿನ ಕಂಪೆನಿಯವರು ಬಿಟ್ಟುಹೋದ ಪ್ರಾಣಿಗಳ ಪಂಜರದೊಳಗೆ ಕೂತು ಮದ್ಯಾಹ್ನದ ಬುತ್ತಿಯನ್ನು ತಿಂದಿದ್ದಾರೆ.  ಮನೆಯಲ್ಲಿ ಅಪ್ಪನ ಆರ್ಭಟ, ಮಲತಾಯಿಯ ಅವಜ್ಞೆ ತಾಳಲಾರದೆ ತನ್ನ ಹದಿನಾರನೆಯ ವಯಸ್ಸಿನಲ್ಲಿ ಕುಂಸಿಯಿಂದ ಭದ್ರಾವತಿಯ ಕಬ್ಬಿಣದ ಕಾಖರ್ಾನೆಗೆ ಮ್ಯಾಂಗನೀಸ್ ಅದಿರು ಸಾಗಿಸುವ ಲಾರಿ ಹತ್ತಿ ಮೈಯನ್ನೆಲ್ಲಾ ಕೆಂಪುಮಾಡಿಕೊಂಡು, ಅದೇ ಕೆಂಪು ಅಂಗಿಯಲ್ಲಿ ಶಿವಮೊಗ್ಗದಿಂದ ಹರಿಹರದವರೆಗೆ ನಡೆದು, ರೈಲು ಹತ್ತಿ, ಟಿಕೇಟಿಲ್ಲದೆ, ಹಸಿವಿನಿಂದ ಅದೇ ಕೆಂಪು ಮೈಯಲ್ಲಿ ಬೊಂಬಾಯಿ ತಲುಪಿದ್ದಾರೆ.</p>
<p> ನಾಗರಾಜ ಪಾಂಡೆಯವರು ನಿನ್ನೆ ಬೊಂಬಾಯಿಯ ತಮ್ಮ ಕಥೆಯನ್ನು ಹೇಳುವಾಗ ನಾನು ಕಣ್ಣೆಲ್ಲ ಕಿವಿಯಾಗಿ ಕೇಳಿಸಿಕೊಳ್ಳುತ್ತಿದ್ದೆ.  ಅವರು ಹೇಳುತ್ತಿದ್ದ ಪದಗಳು ನನ್ನ ಕಣ್ಣಿಗೆ ಕಾಣಿಸುತ್ತಿದ್ದವು.  ಅರವತ್ತರ ದಶಕದ ಹಿಂದಿ ಸಿನೆಮಾವೋಂದರ ರೋಚಕ ಕಥೆಯಂತೆ ಕಾಣಿಸುತ್ತಿತ್ತು. ಹಾಡು, ಹೊಡೆದಾಟ, ಹಸಿವು, ಮದ್ಯಪಾನ, ಏಕಾಂಗಿತನಗಳ ಕಥೆ. ಅದು ಬ್ಲಾಕಿನಲ್ಲಿ ಸಿನೆಮಾ ಟಿಕೇಟು ಮಾರಿ, ಬೀದಿಯ ಕೇಡಿಗಳೊಂದಿಗೆ ಕಾದಾಡಿ, ಗೋಣಿಚೀಲದ ಮೇಲೆ ಮಲಗಿ, ಹಸಿವಿನಲ್ಲಿ ಕಾತರಿಸಿ, ದೇವರು, ಜಾತಿ, ಆಹಾರ, ನಿದ್ದೆಗಳ ಹಂಗು ತೊರೆದು ಆತ್ಮಹತ್ಯೆ ಮಾಡೆಕೊಳ್ಳಲು ಹೋದ ಕನ್ನಡದ ಕವಿಯೊಬ್ಬನ ಕಥೆ ಅದು.  ಬಹುಶಃ ಪಾಂಡೆಯವರು ಆ ಕಾಲದಲ್ಲಿ ತಮ್ಮ ಅತ್ಯುತ್ತಮ ಕವಿತೆಗಳನ್ನು ಬರೆದಿದ್ದಾರೆ.  ಕನ್ನಡದಲ್ಲಿ ಕವಿತೆಗಳನ್ನೂ, ಉರ್ದುವಿನಲ್ಲಿ ಶಾಯರಿಗಳನ್ನು ಹಿಂದಿಯಲ್ಲಿ ದೋಹಾಗಳ್ನು ರಚಿಸಿದ್ದಾರೆ.  ನಿನ್ನೆ ಮಾತು ಮುಗಿಸಿ ಪಾಂಡೆಯವರು ಅರ್ದ ಸಂಕೋಚದಿಂದ ಮತ್ತು ಪೂರಾ ಆತ್ಮ ವಿಶ್ವಾಸದಿಂದ ಅವರು ಬರೆದಿರುವ ಹಳೆಯ ಕವಿತೆಗಳನ್ನು ನನಗೆ ತೋರಿಸಿದ್ದಾರೆ.  ಅಲ್ಲಿಯವರೆಗೆ ಅವರು ಕವಿಗಳು ಎಂದೂ ನನಗೆ ತಿಳಿದಿರಲಿಲ್ಲ.  ಓದಿದ ಮೇಲೆ ವೇದ್ಯವಾಯಿತು.  ಅಪುರ್ವ ಹೊಳಹುಗಳುಳ್ಳ ಕವಿತೆಗಳು. ಆತ್ಮಹತ್ಯೆಯ ಅಂಚಿನ ತನಕ ಹೋದ ಕವಿಯೊಬ್ಬನನ್ನು ಉಳಿಸಿದ ಸಾಲುಗಳಂತೆ ಕಾಣಿಸಿದವು.</p>
<p> 'ಸಾರ್ ಯಾಕೆ ಇದನ್ನು ನೀವು ಪ್ರಕಟಿಸಲಿಲ್ಲ' ಎಂದು ಕೇಳಿದೆ 'ಇಲ್ಲ ನಿಮ್ಮ ಕನ್ನಡ ಸಾಹಿತ್ಯದಲ್ಲಿ ತುಂಬಾ ಗುಂಪುಗಾರಿಕೆಗಳಿವೆ. ಹಾಗಾಗಿ ಅದು ಹೀಗೇ ಇರಲಿ.  ಪ್ರಕಟಗೊಂಡು ಕಲುಷಿತವಾಗುವುದು ಬೇಡ' ಅಂದರು. ಅವರೊಡನೆ ನಾನು ಕನ್ನಡ ಸಾಹಿತ್ಯದ ಪರವಾಗಿ ವಕಾಲತ್ತು ವಹಿಸುವ ಕಾರ್ಯ ಮಾಡುವುದು ಬೇಡ ಅನಿಸಿ ಸುಮ್ಮನಾದೆ, ಆದರೂ ಪಾಂಡೆಯವರ ಕವಿತೆಗಳನ್ನು ಹೀಗೆ ಸುಮ್ಮನೆ ರದ್ದಿಯವನ ಪಾಲು ಮಾಡುವುದು ಬೇಡ ಅನ್ನಿಸುತ್ತಿತ್ತು.  ಏಕೆಂದರೆ ಈಗಾಗಲೇ ಅವರ ಮುಗ್ದರಾದ ಮಡದಿ ತನ್ನ ಪತಿ ದೇವರ ಹಲವು ಕವಿತೆಗಳ ಕೈ ಬರಹದ ಪುಸ್ತಕಗಳನ್ನು ತೂಕಕ್ಕೆ ಮಾರಿದ್ದಾರೆ ಎಂದು ಅವರೇ ನಗುತ್ತಾ ಹೇಳುತ್ತಿದ್ದರು.</p>
<p> ಬೊಂಬಾಯಿಯ ಕಾದಾಟದ ಬದುಕು ಸಾಕಾಗಿ, ಒಂದು ಸಂಜೆ ನಾಗರಾಜ ಪಾಂಡೆಯವರು ಒಂದು ಲೋಟ ಮದ್ಯಕ್ಕೆ ವಿಷವನ್ನು ಬೆರೆಸಿ, ಅದನ್ನು ಸಮುದ್ರ ತೀರದಲ್ಲಿ ಎದುರಿಗಿಟ್ಟುಕೊಂಡು, ಇನ್ನೊಂದು ಲೋಟದಲ್ಲಿ ನೀರು ಬೆರೆಸದ ಮದ್ಯವನ್ನು ಸುರಿದುಕೊಂಡು ಸತ್ತು ಹೋಗಬೇಕು ಎಂದು ಕುಡಿಯುತ್ತಾ ಕೂತರಂತೆ. ಮದ್ಯ ತಲೆಗೇರಿದ ಮೇಲೆ ವಿಷಕುಡಿದರೆ ಸಾಯುವ ಸಂಕಟ ಗೊತ್ತಾಗುವುದಿಲ್ಲ ಎನ್ನುವುದು ಅವರ ಆಲೋಚನೆಯಾಗಿತ್ತಂತೆ.  ಆದರೆ ಕುಡಿದ ಮದ್ಯ ಅವರ ತಲೆಗೇರಿ, ಹಾಗೇ ನಿದ್ದೆ ಬಂದು, ನಿದ್ದೆಯಲ್ಲಿ ಕಾಲುತಾಗಿ ವಿಷದ ಲೋಟ ಸಮುದ್ರದ ಮರಳಿನಲ್ಲಿ ಚೆಲ್ಲಿ ಹೋಯಿತಂತೆ.  ತಾನು ತೀರಿಹೋಗಿ ನರಕದಲ್ಲಿರುವೆನು ಎಂದು ಭಾವಿಸಿ ನಾಗರಾಜ ಪಾಂಡೆಯವರು ಮುಂಜಾನೆ ಕಣ್ಣು ತೆರೆದರೆ ಇನ್ನೂ ಜುಹೂ ಬೀಚಿನಲ್ಲೇ ಇದ್ದರೆಂತೆ.</p>
<p> 'ಕುಡಿತದ ಸತ್ಪಲಗಳು' ಎಂದು ನಾನು ನಗಾಡಿದೆ.  ಆ ಮೇಲೆ ಪಾಂಡೆಯವರು ತಾವು ಬದಲಾದ ಕಥೆಯನ್ನು ಹೇಳಿದರು. ಗಡಿಯಾರ ರಪೇರಿಯ ಕೆಲಸ ಕಲಿತದ್ದು, ಜಾದೂ ಕಲಿತದ್ದು, ಯೋಗಕಲಿತದ್ದು, ರಾಜಯೋಗ ಕಲಿತದ್ದು, ಕುಂಸಿಯ ತಮ್ಮ ಹಳೆಯ ಕೋಟೆಯ ಕುರುಹುಗಳನ್ನು ಹುಡುಕುತ್ತಾ ಭಾರತವನ್ನು ಸುತ್ತಿದ್ದು, ಹಾರ್ಮೋನಿಯಂ ಹಿಡಿದಿದ್ದು, ತತ್ವಶಾಸ್ತ್ರ, ಮನಶಾಸ್ತ್ರ, ಕುವೆಂಪು, ಬೇಂದ್ರೆ, ತೇಜಸ್ವಿ, ಆಲನಹಳ್ಳಿ ಕೀಟ್ಸ್, ಕೋಲ್ರಿಜ್- ಎಲ್ಲರನ್ನೂ ಮೊಗೆ ಮೊಗೆದು ಕುಡಿದಿದ್ದು, ಈಗ ಹೆಂಡತಿ ಮಕ್ಕಳು, ಮೊಮ್ಮಕ್ಕಳು ಎಲ್ಲರ ಜೊತೆ ಮೈಸೂರಿನಲ್ಲಿ ಬದುಕುತ್ತಿರುವುದು ಎಲ್ಲವನ್ನು ಹೇಳುತ್ತಿದ್ದರು.</p>
<p> 'ಮತ್ತೆ ಮತ್ತೆ ಬರುತ್ತೇನೆ. ಕ್ಷಮಿಸಬೇಕು. ತೊಂದರೆ ಕೊಡುತ್ತಿರುತ್ತೇನೆ' ಅಂದಿದ್ದೆ. 'ಹಾಗೇನಿಲ್ಲ. ನಾವೆಲ್ಲಾ ಕ್ರಿಯೇಟಿವ್ ಇಂಟೆಲಿಜೆನ್ಸ್ ಏಜೆನ್ಸಿಗೆ ಸೇರಿದವರು ಬರುತ್ತಲೇ ಇರಿ' ಅಂದಿದ್ದಾರೆ.</p>
<p>ಬಹುಶಃ ನಾನು ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಬಳಿ ಹೋಗುತ್ತಲೇ ಇರುತ್ತೇನೆ.<br />
 </p>
]]></content:encoded>
</item>
<item>
<title><![CDATA[ಪ್ರೊಫೆಸರ್ ವಿಕ್ರಂ ಹೇಳಿದ 'ಚತುರಂಗ ಭವನ'ದ ಕಥೆ]]></title>
<link>http://mysorepost.wordpress.com/2007/05/21/chaduranga-kannada-writer/</link>
<pubDate>Mon, 21 May 2007 18:21:11 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/05/21/chaduranga-kannada-writer/</guid>
<description><![CDATA[ನನ್ನ ಪ್ರೀತಿಯ ಬರಹಗಾರ ದಿವಂಗತ ಚದುರಂಗ ಅವ]]></description>
<content:encoded><![CDATA[<p><img src="http://mysorepost.files.wordpress.com/2007/05/chadurangaa.jpg" alt="chadurangaa.jpg" align="left" height="312" width="199" />ನನ್ನ ಪ್ರೀತಿಯ ಬರಹಗಾರ ದಿವಂಗತ ಚದುರಂಗ ಅವರ ನಿಜವಾದ ಹೆಸರು ಎಂ. ಸುಬ್ರಹ್ಮಣ್ಯ ರಾಜೇ ಅರಸ್ ಎಂಬುದು ಬಹಳ ಕಾಲದವರೆಗೆ ನನಗೆ ತಿಳಿದಿರಲಿಲ್ಲ. ಎಂ. ಅಂದರೆ ಮುದ್ದುರಾಜ ಅರಸ್. ಮುದ್ದುರಾಜ ಅರಸರು ಚದುರಂಗರ ತಂದೆ. ಅವರು ತಲಕಾಡಿನ ರಾಜವಂಶಕ್ಕೆ ಸೇರಿದವರು. ತಲಕಾಡು ಮರಳಿನಿಂದ ಮುಚ್ಚಿದಾಗ ಇವರ ಹಿರಿಯರು ಅಲ್ಲಿಂದ ಸಮೀಪದ ಪಾಳ್ಯಕ್ಕೆ ಹೋಗಿ ನೆಲೆಸಿ ಪಾಳ್ಯದ ಚತುರಂಗ ಅರಸು ಮನೆತನದವರು ಅಂತ ಹೆಸರಾದವರು. ಈ ಮನೆತನದ ಅರಸರು ಚದುರಂಗ ಕ್ರೀಡೆಯಲ್ಲಿ ಪ್ರವೀಣರಾಗಿದ್ದರಿಂದ ಇವರಿಗೆ ಆ ಹೆಸರು ವಂಶಪಾರಂಪರ್ಯವಾಗಿ ಬಂದಿತ್ತು.<br />
ನಾನು ಬಹಳ ಕಾಲದವರೆಗೆ ಚದುರಂಗ ಎನ್ನುವುದು ಒಂದು ಕಾವ್ಯನಾಮ ಎಂದೇ ತಿಳಿದಿದ್ದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಯುವಕನಾಗಿದ್ದ ನನ್ನನ್ನು ಬೆಂಗಳೂರಿನ ಚಾಮರಾಜಪೇಟೆಯ ಹಳೆಯ ಕಾಲದ ಪಬ್ ಒಂದರಲ್ಲಿ ಪ್ರೀತಿಯಿಂದ ಕೂರಿಸಿಕೊಂಡು ಚದುರಂಗರು ಕಥೆ ಬರೆಯುವುದು ಹೇಗೆ ಎಂದು ಸೊಗಸಾಗಿ ಪಾಠ ಹೇಳಿಕೊಟ್ಟಿದ್ದರು. ಅರೆಬಿಯನ್ ರಾತ್ರಿಗಳ ಶಹಜéಾದೆಯ ಕಥೆ ಹೇಳಿ `ಕಥೆಯೆಂದರೆ ಹೀಗಿರಬೇಕಯ್ಯ' ಎಂದು ಬೆನ್ನು ತಟ್ಟಿದ್ದರು. ಜುಲೈಕಾ ಮತ್ತು ಯೂಸುಫ್ ಎಂಬ ಅಮರ ಪ್ರೇಮಿಗಳ ಕಥೆ ಹೇಳಿದ್ದರು. ನಾನು ನನ್ನ ಮೊದಲ ಕಥೆ ಬರೆದಾಗ ಅದರಲ್ಲಿ ಈ ಕತೆಯನ್ನೂ ಒಂದು ಚೂರು ಸೇರಿಸಿ ಖುಷಿ ಪಟ್ಟಿದ್ದೆ. ಅದನ್ನು ಓದಲು ಚದುರಂಗರಿಗೆ ಕೊಡಲು ಮರೆತುಬಿಟ್ಟಿದ್ದೆ.<!--more--><br />
ಅದು ನಡೆದು ಕೆಲವು ವರ್ಷಗಳ ನಂತರ ಒಂದು ದೀಪಾವಳಿಯ ದಿನ ಚದುರಂಗರು ಜಯಲಕ್ಷ್ಮೀಪುರಂನಲ್ಲಿ ತಾವೇ ಕಟ್ಟಿಸಿದ ಮನೆಯಲ್ಲಿ ಮಲಗಿ ಒಂದೊಂದೇ ಇಂಚು ಸಾವನ್ನು ಆವಾಹಿಸಿಕೊಳ್ಳುತ್ತಾ ನಗುತ್ತಾ ತೀರಿಹೋಗಿದ್ದರು. ಜನನ ಮರಣ ಇತ್ಯಾದಿಗಳಲ್ಲಿ ನಂಬಿಕೆ ಕಳೆದುಕೊಂಡಿರುವ ನಾನು ತೀರಿಕೊಂಡ ಅವರನ್ನು ನೋಡಲು ಹೋಗಿರಲಿಲ್ಲ. ಆದರೂ ನನ್ನೊಳಗೆ ಒಂದು ಪ್ರಶ್ನೆ ಇದ್ದೇ ಇತ್ತು. ಉಯ್ಯಾಲೆ, ವೈಶಾಖ, ಸರ್ವಮಂಗಳಾ,ಹೆಜ್ಜಾಲ ದಂತಹ ಸಾಮಾಜಿಕ ಕಾದಂಬರಿಗಳನ್ನು ಬರೆದ ಚದುರಂಗರು ಯಾಕೆ ಎಲ್ಲೂ ಕೂಡಾ ತಲಕಾಡಿನ ಪಾಳ್ಯದ ಚತುರಂಗ ಮನೆತನದ ರೋಮಾಂಚಕರವೂ ವಿಷಾದಕರವೂ ಆದ ಏಳು ಬೀಳುಗಳ ಕುರಿತು ಬರೆಯಲಿಲ್ಲ ಎಂದು ಆಗಾಗ ಯೋಚಿಸುತ್ತಿದ್ದೆ. ನನಗೆ ಅರೆಬಿಯನ್ ರಾತ್ರಿಗಳ ಕಥೆ ಹೇಳಿದ ಅವರು ಅವರ ಮೈಸೂರಿನ ಅರಮನೆಯ ಹಗಲು ರಾತ್ರಿಗಳ ಕುರಿತು ಯಾಕೆ ಹೇಳಲಿಲ್ಲ ಎಂದು ಯೋಚಿಸುತ್ತಿದ್ದೆ. ಆಮೇಲೆ ಅವರವರ ಕಥೆಗಳ ಹಣೆಯಬರಹದ ಕುರಿತು ಹೆಚ್ಚು ಯೋಚಿಸುವುದು ಒಳಿತಲ್ಲ, ಹಾಗೆ ನೋಡಿದರೆ ನನ್ನ ರಾತ್ರಿಗಳ ಎಲ್ಲ ಕಥೆಗಳನ್ನೂ ಎಲ್ಲಿಯಾದರೂ ಬರೆಯಲು ಹೋದರೆ ಏನೆಲ್ಲಾ ನಡೆಯಬಹುದು ಎಂದು ಯೋಚಿಸಿ ಬೆಚ್ಚಿಬೀಳುತ್ತಿದ್ದೆ.<br />
ಮೊನ್ನೆ ಶುಕ್ರವಾರ ಸಂಜೆ ಚದುರಂಗರ ಮಗ ಹಾಗೂ ನನ್ನ ಹಿರಿಯ ಸ್ನೇಹಿತರಾದ ಪ್ರೊಪೆಸರ್ ವಿಕ್ರಮರಾಜ ಅರಸರ ಜೊತೆ ಮೈಸೂರಿನ ಪಬ್ ಒಂದರಲ್ಲಿ ಕುಳಿತು ಚತುರಂಗ ಮನೆತನದ ಕಥೆ ಕೇಳಿಸಿಕೊಳ್ಳುತ್ತಿದ್ದೆ.</p>
<p>ಕಥೆ ಹೇಳುತ್ತಾ ಹೇಳುತ್ತಾ ವಿಕ್ರಮರಾಜ ಅರಸರು<img src="http://mysorepost.files.wordpress.com/2007/05/vikram.jpg" alt="vikram.jpg" align="right" height="205" width="351" /> ಉದ್ವಿಗ್ನರಾಗ ತೊಡಗಿದ್ದರು. 'ಉದ್ವಿಗ್ನರಾಗಬೇಡಿ. ಕಥೆ ಹೇಳಿ' ಎಂದು ಅವರನ್ನು ನಡುನಡುವೆ ಛೇಡಿಸುತ್ತಿದ್ದೆ. ಇದು ಉದ್ವಿಗ್ನತೆ ಅಲ್ಲ ವಿಷಾದ ಎಂದು ಅವರು ಸ್ಪಷ್ಟೀಕರಣ ನೀಡುತ್ತಿದ್ದರು. ಕಥೆ ಎಲ್ಲ ಹೇಳಿ ಮುಗಿಸಿದ ಮೇಲೆ ಗಟಗಟನೆ ಬಿಯರ್ ಕುಡಿದು ಮುಗಿಸಿ ಕತೆ ಹೇಗಿತ್ತು ಎಂದು ಕೇಳಿದರು. ಕಥೆಯ ಅಂಶ ಕಡಿಮೆ ಇತ್ತು ತತ್ವಶಾಸ್ತ್ರ ಕೊಂಚ ಜಾಸ್ತಿ ಆಯಿತು ಎಂದು ಪುನಃ ಕೀಟಲೆ ಮಾಡಿದೆ. 'ಹಾಗಾದರೆ ನಡೆಯಿರಿ ಕಥೆ ಹೇಳುವುದು ಬೇಡ. ತೋರಿಸಿಯೇ ಬಿಡುತ್ತೇನೆ' ಎಂದು ಕೈಹಿಡಿದು ಕರಕೊಂಡು ಚದುರಂಗರು ಅರಸರಂತೆ ಬಾಳಿ ಬದುಕಬೇಕಿದ್ದ 'ಚತುರಂಗ ಭವನ' ಎಂಬ ಸುಂದರವು ಭವ್ಯವೂ ವಿಶಾಲವೂ ಆದ ಮಹಲ್ಲನ್ನು ತೋರಿಸಿದರು.</p>
<p>ನಾವು ಹೋದಾಗ ಅಲ್ಲಿ ನಟ ವಿಷ್ಣುವರ್ಧನ್ ಅಭಿನಯಿಸುತ್ತಿರುವ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಯಾವು ಯಾವುದೋ ಭಾಷೆಗಳನ್ನು ಮಾತನಾಡುವ, ನೋಡಲು ಹೇಗೆ ಹೇಗೋ ಇರುವ</p>
<p style="text-align:center;"><img src="http://mysorepost.files.wordpress.com/2007/05/chthuranga-bhavan3.jpg" alt="chthuranga-bhavan3.jpg" height="452" width="548" /></p>
<p> ಕುರುಚಲು ಗಡ್ಡದ, ನಿದ್ರೆಯಿಲ್ಲದ ಕಣ್ಣುಗಳ ಲೈಟ್ಬಾಯ್ಗಳೂ, ಸ್ಪಾಟ್ಬಾಯ್ಗಳೂ ಚತುರಂಗ ಭವನದ ತುಂಬೆಲ್ಲ ತಮ್ಮ ಲೈಟ್ಗಳನ್ನೂ, ಬೋಡರ್ುಗಳನ್ನೂ ಹರವಿಕೊಂಡು ತಲ್ಲೀನರಾಗಿದ್ದರು. ಯಾವುದೋ ಮಧ್ಯ ತಯಾರಿಕೆಯ ಕಾಖರ್ಾನೆಯೊಂದರ ವಿಶ್ರಾಂತಿಗೃಹವಾಗಿ ಹೋಗಿರುವ ಚತುರಂಗ ಭವನ ಶಾಪಗ್ರಸ್ತ ಕನ್ಯೆಯಂತೆ ಸಂಸಾರ ಸುಖವಿಲ್ಲದೆ ಹಾಗೇ ನಾಜೂಕಾಗಿ ಉಳಕೊಂಡು ಬಿಟ್ಟಿತ್ತು. ಒಂದು ಕಾಲದಲ್ಲಿ ಚದುರಂಗರನ್ನು ಹುಡುಕಿಕೊಂಡು ಬರುತ್ತಿದ್ದ ಆನಂದ, ಅ.ನ.ಕೃ., ತರಾಸು, ನಿರಂಜನ ರಂತಹ ಲೇಖಕರನ್ನೂ, ಕೇರಳದ ಆ ಕಾಲದ ಭೂಗತ ಕಮ್ಯೂನಿಷ್ಟ್ ನಾಯಕರನ್ನೂ ಕಂಡಿದ್ದ ಆ ರಾಜಮಹಲ್ ಇದೀಗ ನಟ ನಟಿಯರ ಕಲರವದಿಂದ ತುಂಬಿಕೊಂಡಿತ್ತು.</p>
<p>ಹಾಗೇ ನೋಡಿದೆ. ಆ ಮಹಲಿನಲ್ಲಿ ಸುಖವಾಗಿರುವವನು ಅಲ್ಲಿಯ ಕೆಲಸದ ಕಾವಲುಗಾರ ಒಬ್ಬ ಮಾತ್ರ ಅನಿಸಿತ್ತು. ಆ ಕಾವಲುಗಾರನ ಮಗು ಚಿತ್ರೀಕರಣದ ನಡುವಲ್ಲಿ ಗಾಳಿಯಿಲ್ಲದ ಚೆಂಡೊಂದನ್ನು ಒದ್ದು ಆಟವಾಡುತ್ತಿತ್ತು. ಅದನ್ನು ಕಂಡು ನನ್ನ ಮನಸಲ್ಲಿದ್ದ ಯೋಚನೆಯನ್ನು ವಿಕ್ರಮರಾಜ ಅರಸರೂ ಬಾಯಿಬಿಟ್ಟು ಹೇಳಿದರು.<br />
ನಮಗಿಬ್ಬರಿಗೂ ಏಕ ಕಾಲದಲ್ಲಿ ಒಂದೇ ಸತ್ಯ ಹೊಳೆಯಲು ತೊಡಗಿತ್ತು. ದಾರಿಯಲ್ಲಿ ಹಿಂತಿರುಗಿ ಬರುವಾಗ 'ಸಾರ್ ನೀವು ದಯವಿಟ್ಟು 'ಚತುರಂಗ ಭವನ' ಎಂಬ ಕಾದಂಬರಿಯನ್ನು ಬರೆಯಬೇಕು' ಎಂದು ನಾನು ಅವರಲ್ಲಿ ಕೇಳಿಕೊಳ್ಳುತ್ತಿದ್ದೆ 'ಇಲ್ಲ ನೀವೇ ಬರೆಯಬೇಕು' ಎಂದು ಅವರು ನನ್ನನ್ನು ಕೇಳಿಕೊಳ್ಳುತ್ತಿದ್ದರು. 'ಹಾಗಾದರೆ ಸಂಯುಕ್ತವಾಗಿ ಬರೆಯೋಣ,  ನಿಮ್ಮ ತತ್ವಜ್ಞಾನ ನನ್ನ ಕಥನ ನಿಮ್ಮ ವಿಷಾದ ಮತ್ತು ನನ್ನ ಉದ್ವಿಗ್ನತೆ' ಎಂದು ಹೇಳಿದೆ. ನಾವು ಆಮೇಲೆ ಇನ್ನೂ ಬಹಳ ಹೊತ್ತು ಮಾತನಾಡಿದೆವು.</p>
<p><img src="http://mysorepost.files.wordpress.com/2007/05/chthuranga-bhavan.jpg" alt="chthuranga-bhavan.jpg" align="left" /></p>
<p>ವಿಕ್ರಂ ರಾಜ ಅರಸರು ಹೇಳಿದ ಚತುರಂಗ ಭವನದ ಕಥೆ ಸಂಕ್ಷಿಪ್ತವಾಗಿ ಹೀಗಿದೆ:<br />
ಚತುರಂಗ ಬಸವರಾಜ ಅರಸಿನವರ ಮಗ ಅನಂತರಾಜ ಅರಸಿನವರು. ಇವರು ಹತ್ತೊಂಬತ್ತನೆಯ ಶತಮಾನದ ಆದಿ ಭಾಗದಲ್ಲಿ ಹುಟ್ಟಿದವರು. ಇವರು ಚತುರಂಗ ಪ್ರವೀಣರು. ಜೊತೆಗೆ 'ಗ್ರಹಣ ದರ್ಪಣ' ಎಂಬ ಪುಸ್ತಕವನ್ನು ಬರೆದಿದ್ದಾರೆ. ಕಾಲಕಾಲಕ್ಕೆ ಸಂಭವಿಸುವ ಗ್ರಹಣಗಳನ್ನು ಎಲ್ಲ ಕನ್ನಡಿಗರೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬರೆದು ತೋರಿಸಿದ್ದಾರೆ. ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ ಆಜ್ನೆಯಂತೆ ಬರೆಯಲ್ಪಟ್ಟ ಈ ಕೃತಿಯನ್ನು 1863ರಲ್ಲಿ ಸನ್ನಿಧಾನಕ್ಕೆ ಅಪರ್ಿಸಲಾಗಿದೆ. ಈ ಗ್ರಂಥ ಬರೆಯುವ ಹೊತ್ತಲ್ಲೇ ಅನಂತರಾಜ ಅರಸರ ಜೀವನದಲ್ಲಿ ಇನ್ನೊಂದು ಆಘಾತಕರ ಘಟನೆ ನಡೆದಿದೆ.<br />
ಅದೇನೆಂದರೆ ಚದುರಂಗದಾಟ ಪ್ರವೀಣರಾಗಿದ್ದ ಅವರು ಒಂದು ಸಂಜೆ ಮಹಾರಾಜರೊಡನೆ ಚದುರಂಗವಾಡುತ್ತಾ ಆಟದ ಉತ್ಸಾಹದಲ್ಲಿ ಔಚಿತ್ಯ ಪ್ರಜ್ಞೆಯನ್ನೂ ಮರೆತು ಮಹಾರಾಜಾ ಮುಮ್ಮುಡಿ ಕೃಷ್ಣರಾಜ ಒಡೆಯರನ್ನೇ ಚದುರಂಗದಲ್ಲಿ ಸೋಲಿಸಿದ್ದಾರೆ. ಇದರಿಂದ ಕುಪಿತರಾದ ಮಹಾರಾಜರು ವಜ್ರ ವೈಡೂರ್ಯ ಖಚಿತವಾದ ಚದುರಂಗದ ದಾಳವೊಂದನ್ನು ಅನಂತರಾಜರ ಮುಖಕ್ಕೆ ನೆತ್ತರು ಒಸರುವಂತೆ ಬಿಸುಡಿದ್ದಾರೆ. ರಾಜರ ಕೋಪಕ್ಕೆ ತುತ್ತಾದ ಅನಂತರಾಜ ಅರಸರು ವ್ಯಾಕುಲರಾಗಿ ದೊಡ್ಡಕೆರೆಯ ದಡದಲ್ಲಿ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಆಗ ಆ ಹಾದಿಯಲ್ಲಿ ಬಂದ ಕಲ್ಲಹಳ್ಳಿಯ ಅರಸು ಮನೆತನದ ರೈತರೊಬ್ಬರು ಅನಂತರಾಜರಿಗೆ ಸಾಂತ್ವನ ಹೇಳಿ ಹಳ್ಳಿಗೆ ಕೊಂಡೊಯ್ದು ಅವರಿಗೆ ಕೃಷಿಭೂಮಿಯನ್ನು ಒದಗಿಸಿ ಹಳ್ಳಿಯ ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನೂ ವಹಿಸಿ ಅವರು ವ್ಯಾಕುಲವನ್ನು ಮರೆಯುವಂತೆ ಮಾಡಿದ್ದಾರೆ. ಅನಂತರಾಜ ಅರಸರು ತಮ್ಮ ಜೀವನದ ಕೊನೆಯವರೆಗೂ ಕಲ್ಲಹಳ್ಳಿಯಲ್ಲೇ ಕಳೆದಿದ್ದಾರೆ.<br />
ಕಾದಂಬರಿಕಾರ ಚದುರಂಗರೂ, ದಿವಂಗತ ಮುಖ್ಯಮಂತ್ರಿ ಡಿ. ದೇವರಾಜ ಅರಸರೂ ಹೀಗೆ ಕಲ್ಲಹಳ್ಳಿಯ ರೈತಾಪಿ ಜನರ ನಡುವಿಂದ ಬಂದಿದ್ದಾರೆ. ಚದುರಂಗರು ಅನಂತರಾಜ ಅರಸರ ಮೊಮ್ಮಗ. ಅವರ ಹಿರಿಯ ಸಹೋದರ ಬಸವರಾಜ ಅರಸರು ರಾಜಕುಮಾರಿ ಲೀಲಾವತಿ ದೇವಿಯವರನ್ನು ಮದುವೆಯಾಗಿ ಮೈಸೂರು ಅರಸರ ಮನೆತನದ ಜೊತೆ ಪುನಃ ಸಂಬಂಧ ಬೆಳೆಸಿಕೊಂಡರು. ಮೈಸೂರಿನ ಜಯಲಕ್ಷ್ಮಿ ವಿಲಾಸ, ಚಿತ್ತರಂಜನ್ ಮಹಲು, ಲೋಕರಂಜನ್ ಮಹಲ್ ಅರಮನೆಗಳಲ್ಲಿ ಇದ್ದವರು.ಒಂದರಲ್ಲಿ ಶಯನ,ಇನ್ನೊಂದರಲ್ಲಿ ವಿರಾಮ ಮತ್ತೊಂದರಲ್ಲಿ ಮಾತುಕತೆ ಎಂದು ಅವುಗಳಲ್ಲಿ ಕಳೆದವರು. ಹಳ್ಳಿಯಿಂದ ಬಂದ ತನ್ನ ತಾಯಿ ಮತ್ತು ತಮ್ಮ ಚದುರಂಗರಿಗಾಗಿ ಚತುರಂಗಭವನ ಎಂಬ ಈ ಮಹಲನ್ನು ಕಟ್ಟಿಸಿದ್ದರು.<br />
ಬಸವರಾಜ ಅರಸರಿಗೆ ತನ್ನ ತಮ್ಮ ಚದುರಂಗ ಅಲಿಯಾಸ್ ಸುಬ್ರಹ್ಮಣ್ಯರಾಜ ಅರಸ್ ಅವರೂ ಕೂಡಾ ರಾಜಮನೆತನದ ಕನ್ಯೆಯೊಬ್ಬಳನ್ನು ಕೈಹಿಡಿಯ ಬೇಕೆಂಬ ಆಸೆ ಇತ್ತು. ಅರಮನೆಯಿಂದಲೂ ಈ ಪ್ರಸ್ತಾಪ ಬಂದಿತ್ತು. ಮದುವೆಯೂ ತೀಮರ್ಾನವಾಗಿತ್ತು. ರಾಜಮನೆತನದ ಆ ಸುಂದರಿಯೂ ಅಪೂರ್ವವಾಗಿದ್ದರು. ಆದರೆ ಆಗಲೇ ಸಾಹಿತಿಯೂ ಪ್ರಗತಿಶೀಲನೂ, ಬಂಡಾಯಗಾರನೂ, ಪ್ರಜಾಪ್ರಭುತ್ವವಾದಿಯೂ, ಪ್ರೇಮಿಯೂ ಆಗಿದ್ದ ಚದುರಂಗ ಎಂಬ ಯುವಕ ಹೇಳದೇ ಕೇಳದೇ ರಾತ್ರೋರಾತ್ರಿ ಮೈಸೂರಿನಿಂದ ಪರಾರಿಯಾಗಿ ರಾಜ ಸಂಬಂಧದಿಂದ ಪಾರಾಗಿದ್ದರು.</p>
<p><img src="http://mysorepost.wordpress.com/files/2007/05/chthuranga-bhavan2.thumbnail.jpg" alt="chthuranga-bhavan2.jpg" align="right" height="287" width="268" /></p>
<p>ಏಕೆಂದರೆ ಅವರು ಆಗಲೇ ಕಲಾವಿದೆಯೂ ಸೂಕ್ಷ್ಮ ಮತಿಯೂ ಆದ ದೊಡ್ಡಮಣ್ಣಿ ಎಂಬ ರೈತರ ಮಗಳನ್ನು ಪ್ರೀತಿಸುತ್ತಿದ್ದರು. ಅವರಿಬ್ಬರ ಏಕೈಕ ಪುತ್ರನೇ ಈಗ ಇಂಗ್ಲಿಷ್ ಪ್ರೊಪೆಸರ್ ಆಗಿರುವ ವಿಕ್ರಂರಾಜೇ ಅರಸ್. ವಿನಾಕಾರಣವಾಗಿ ನನ್ನಂತಹ ಕೀಟಲೆಕೋರನನ್ನು ಕಾದಂಬರಿಕೋರನಾಗು ಎಂದು ಒತ್ತಾಯಿಸುತ್ತಿರುವ ನನ್ನ ಹಿರಿಯ ಸ್ನೇಹಿತರು. ನನ್ನ ಜೊತೆ</p>
<p>ಸಿಗರೇಟನ್ನೂ ಬಿಯರನ್ನೂ ಚತುರಂಗ ಭವನದ ಕಥೆಗಳನ್ನೂ ಹಂಚಿಕೊಳ್ಳುತ್ತಿರುವ ಉದಾರ ಹೃದಯವಂತರು.<br />
ವಿಕ್ರಮರಾಜ ಅರಸರು ಹೇಳಿದ ಚತುರಂಗ ಭವನದ ನಿಜವಾದ ಕಥೆ ಇರುವುದು ಇಬ್ಬರು ಅಣ್ಣತಮ್ಮಂದಿರ ನಡುವೆ. ಇಬ್ಬರೂ ರಾಜಯೋಗವಿದ್ದವರು. ಅಣ್ಣ ರಾಜಕುಮಾರರಾದರು. ತಮ್ಮ ಕಾದಂಬರಿಕಾರರಾದರು. ಇಬ್ಬರೂ ಒಳಗೊಳಗೆ ತಮ್ಮ ಹಠವೇ ಸರಿ ಎಂದು ಸಾಧಿಸಿದರು. ಈಗ ಇಬ್ಬರು ಇಲ್ಲ. ಆದರೆ ಬಸವರಾಜ ಅರಸರು ಬಾಳಿದ ಹಾಗೂ ಸುಬ್ರಹ್ಮಣ್ಯರಾಜೇ ಅರಸ್ ಉರುಪ್ ನನ್ನ ಪ್ರೀತಿಯ ಚದುರಂಗ ತಿರಸ್ಕರಿಸಿದ ಈ ಚತುರಂಗ ಭವನ ಈಗ ಯಾವಾಗಲೂ ನಟನಟಿಯರಿಂದ ಕ್ಯಾಮರಾ ದೀಪಗಳಿಂದ ಗಿಜಿಗಿಡುತ್ತಿರುತ್ತದೆ. ಆದರೆ ಇಲ್ಲಿ ಯಾರೂ ಸಂಸಾರ ಹೂಡುವುದಿಲ್ಲ. ಏಕೆಂದರೆ ಇದು ಶಾಪಗ್ರಸ್ತ ಅರಮನೆ ಎಂದು ಬಹಳ ಕತೆಗಳೇ ಇವೆ.</p>
]]></content:encoded>
</item>
<item>
<title><![CDATA[ ಬೈಕು ಪಾಲಿಸುವ ಮರಳು ಗೋಪಾಲ]]></title>
<link>http://mysorepost.wordpress.com/2007/05/14/gopala/</link>
<pubDate>Mon, 14 May 2007 17:47:14 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/05/14/gopala/</guid>
<description><![CDATA[             
ಈ ಬೈಕಿನ ರಿಮ್ಮು ಒರೆಸುವ ಮರಳು ]]></description>
<content:encoded><![CDATA[<p>             <img src="http://mysorepost.files.wordpress.com/2007/05/gopalafirst.jpg" alt="gopalafirst.jpg" /></p>
<p><strong><em>ಈ</em></strong> ಬೈಕಿನ ರಿಮ್ಮು ಒರೆಸುವ ಮರಳು ಗೋಪಾಲನ ಕುರಿತು ಗದ್ಯದಲ್ಲಿ ಬರೆಯುವುದೋ ಪದ್ಯದಲ್ಲಿ ಬರೆಯುವದೋ ಎಂದು ನನಗೆ ಇನ್ನೂ ಗೊತ್ತಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ತರಹದ ಸಂದಿಗ್ಧತೆ ಎಂದೂ ಎದುರಾಗಿಯೂ ಇರಲಿಲ್ಲ. ನನ್ನ ಬೈಕಿನ ಬೇರೆ ಎಲ್ಲಾ ಭಾಗಗಳೂ ಕೊಳೆಯಿಂದ ತುಂಬಿದ್ದರೂ ಚಕ್ರಗಳ ನಡುವಿನ ಲೋಹದ ರಿಮ್ಮುಗಳು ಯಾವಾಗಲೂ ಪಳಪಳನೆ ಹೊಳೆಯುತ್ತಿರುವ ಹಿಂದಿನ ಗುಟ್ಟು ಈವತ್ತಿನವರೆಗೆ ನನ್ನ ಹೆಂಡತಿಗೂ ಗೊತ್ತಿರಲಿಲ್ಲ. ಈವತ್ತು ಬರೆಯುವ ಮೊದಲು ಈ ಕುರಿತು ನನ್ನೊಳಗೂ ಇರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಆಕೆಗೆ ಮರಳು ಗೋಪಾಲನ ಕತೆ ಹೇಳಿ ಮುಗಿಸಿ ಆತನ ಚಿತ್ರಗಳನ್ನು ತೋರಿಸಿ ಬರೆಯಲು ಕುಳಿತಿರುವೆ.</p>
<p>ದಿನವೂ ನನ್ನ ಬೈಕಿನ ರಿಮ್ಮನ್ನು ಮಾತ್ರ ಒರೆಸಿ ಪಳಪಳ ಮಾಡಿ ಒಂದು ರೂಪಾಯಿ ನಾಣ್ಯವನ್ನು ಇಸಕೊಂಡು ತನ್ನ ನಾಯಿ ಕರಿಯನ ಜೊತೆ ಮರೆಯಾಗುವ ಈ ಗೋಪಾಲ ಉಳಿದ ಸಮಯದಲ್ಲಿ ಎಲ್ಲಿರುತ್ತಾನೆ ಹೇಗಿರುತ್ತಾನೆ ಎಂಬುದು ಇದುವರೆಗೆ ನನಗೂ ಗೊತ್ತಿರಲಿಲ್ಲ. ನಿನ್ನೆ ಮಧ್ಯಾಹ್ನದ ನಂತರ ಈತನನ್ನು ಹುಡುಕುತ್ತಾ ಒಂಟಿಕೊಪ್ಪಲಿನ ಓಣಿ ಓಣಿಗಳಲ್ಲಿ  ಆತನನ್ನೂ ಆತ ಸಾಕಿರುವ ಇತರ ನಾಲ್ಕು ನಾಯಿಗಳನ್ನು ನೋಡಿ ಆತನೊಡನೆ ಮಾತನಾಡಿ ಏನೂ ಗೊತ್ತಾಗದೆ ಬಂದು ಕೂತಿರುವೆ.</p>
<p><img src="http://mysorepost.files.wordpress.com/2007/05/gopala-2.jpg" alt="gopala-2.jpg" /></p>
<p>ಮೈಸೂರಿನ ಯಾದವಗಿರಿಯಲ್ಲಿರುವ ತ.ರಾ.ಸು. ವೃತ್ತದ ಒಂದು ಮೂಲೆಯಲ್ಲಿರುವ ಗೂಡಂಗಡಿಯ ಮುಂದೆ ಟೀ ಕುಡಿಯಲು, ಸಿಗರೇಟು ಸೇದಲು, ಲಾಟರಿ ಟಿಕೇಟುಗಳನ್ನು ಕೊಳ್ಳಲು ಹತ್ತಾರು ಜನ ಬರುತ್ತಾ ಹೋಗುತ್ತಾ ಇರುತ್ತಾರೆ. ಕೆಲವರು ದಿನವಿಡೀ ಅಲ್ಲಿ ಮರದ ಕೆಳಗೆ ಸುಮ್ಮನೆ ಕುಳಿತಿರುತ್ತಾರೆ. ಬೆಳಗಿನ ಸುಮಾರು ಎಂಟು ಗಂಟೆಯಿಂದ ಹತ್ತುಗಂಟೆಯವರೆಗೆ ಈ ಗೋಪಾಲ ಕೈಯಲ್ಲಿ ಒಂದು ಮಾಸಿದ ಬಟ್ಟೆ ಹಿಡಿದುಕೊಂಡು ಬಾಯಲ್ಲಿ ಯಾರೋ ಎಳೆದು ಬಿಸಾಕಿದ ಸಿಗರೇಟು ತುಂಡನ್ನು ಕಚ್ಚಿಕೊಂಡು ಯಾರದಾದರೂ ಬೈಕಿನ ರಿಮ್ಮನ್ನು ಒರೆಸುತ್ತಾ ಕುಳಿತಿರುತ್ತಾನೆ. ಆತನ ಕರಿಯ ಎಂಬ ಹೆಸರಿನ ನಾಯಿ ಆತನ ಪಕ್ಕದಲ್ಲಿ ಧ್ಯಾನ ಮಾಡುವಂತೆ ಮಲಗಿರುತ್ತದೆ. ರಿಮ್ಮ ಒರೆಸುವ ಗೋಪಾಲ ಕೆಲವೊಮ್ಮೆ ವಿನಾಕಾರಣ ಕಿರುಚುತ್ತಾನೆ. ನಾಟಕದ ಹಾಡುಗಳನ್ನು ಹಾಡುತ್ತಿರುತ್ತಾನೆ. ತನ್ನಷ್ಟಕ್ಕೆ ಯಾರಾದರೂ ಜೊತೆ ವಾಗ್ವಾದದಲ್ಲಿ ತೊಡಗಿರುತ್ತಾನೆ. ಆತನ ಮುಖ ಸದಾ ವ್ಯಗ್ರವಾಗಿರುತ್ತದೆ. ಏನಾದರೂ ಮಾತನಾಡಿಸಿದರೆ ಎದ್ದು ಪರಚುವಂತೆ ಕಾಣುತ್ತಾನೆ. ಹಾಗಾಗಿ ಈತನ ಸಹವಾಸವೂ ಬೇಡ, ಈತನ ಕಥೆಯೂ ಬೇಡ ಎಂದು ಯಾವಾಗಲೂ ಈತ ಒರೆಸಿ ಮುಗಿಸಿದೊಡನೆ ಒಂದು ರುಪಾಯಿ ನಾಣ್ಯವನ್ನು ಕೈಗಿತ್ತು ಬೈಕು ಸ್ಟಾರ್ಟ್ ಮಾಡುತ್ತಿದ್ದೆ. ನಿನ್ನೆಯೂ ಹಾಗೆಯೇ ಮಾಡಲು ಹೊರಟಿದ್ದೆ.<!--more--></p>
<p>ಆದರೆ ಅಷ್ಟರಲ್ಲಿ ಪಕ್ಕದ ಇನ್ನೊಂದು ಗೂಡಂಗಡಿಯ ಕಡೆಯಿಂದ ಇನ್ನೊಬ್ಬ ಮರುಳ ಕಿರುಚಾಡುವುದು ಕೇಳಿಸಿತು. ಬಹುಶಃ ಆತನ ಹೆಸರು ಅನಂತ. ದಕ್ಷಿಣ ಕನ್ನಡದ ಕಡೆಯವನಿರಬೇಕು. ಯಾವಾಗಲೂ ವೇದಾಂತಿಯಂತೆ ಅಲ್ಲಿ ಎಲ್ಲಾದರೂ ಕುಳಿತುಕೊಂಡಿರುತ್ತಿದ್ದವನು ಯಾವುದೋ ಸಲುವಾಗಿ ಕೋಪ ಮಾಡಿಕೊಂಡು ಆ ಅಂಗಡಿಯವನೊಡನೆ ಕಿರುಚಾಡಲು ತೊಡಗಿದ್ದ. ಆ ಅಂಗಡಿಯವನು ಬೇರೆ ಏನೂ ಮಾಡಲಿಲ್ಲ. ದೊಡ್ಡ ದೊಣ್ಣೆಯೊಂದನ್ನು ಎತ್ತಿಕೊಂಡು ಆ ಅನಂತನಿಗೆ ಬಡಿಯಲು ಶುರುಮಾಡಿದ್ದ. ಎಲ್ಲರೂ ನೋಡುತ್ತಿದ್ದರು. ನಾನೂ ನೋಡುತ್ತಿದ್ದೆ. ಅದು ಏನನ್ನಿಸಿತೋ ಬೈಕು ಒರೆಸುತ್ತಿದ್ದ ಮರಳು ಗೋಪಾಲ ತಾನೂ ಜೋರಾಗಿ ಅರಚಿಕೊಂಡು ಎದ್ದು ಓಡಿಹೋಗಿ ಅನಂತನನ್ನು ಆ ದೊಣ್ಣೆಯ ಪೆಟ್ಟುಗಳಿಂದ ರಕ್ಷಿಸಿ ಆತನನ್ನು ದೂರ ಕರೆದುಕೊಂಡು ಹೋಗಿ ಮೌನವಾಗಿ ಹಿಂದಿರುಗಿಬಂದು ಪುನಃ ತಲೆತಗ್ಗಿಸಿ ಒರೆಸಲು ತೊಡಗಿದ. ಆ ಗದ್ದಲದಿಂದ ಮೇಲೆದ್ದ ಗೋಪಾಲನ ನಾಯಿ ಕರಿಯ ಮೈಮುರಿದು ಪುನಃ ತಲೆತಗ್ಗಿಸಿ ಮಲಗಿಕೊಂಡಿತು.</p>
<p>ನನಗೆ ಇನ್ನು ಈ ಗೋಪಾಲನೊಡನೆ ಮಾತನಾಡದೆ ಇರುವುದು ಸರಿ ಅಲ್ಲ ಅನ್ನಿಸಿತು. ಅದೂ ಅಲ್ಲದೆ ಅದುವರೆಗೆ ಇಷ್ಟು ಕಾಲದವರೆಗೆ ದಿನಾ ಬೈಕು ಒರೆಸಿಕೊಳ್ಳುತ್ತಿದ್ದರೂ ಆತನ ಹೆಸರೂ ನನಗೆ ತಿಳಿದಿಲ್ಲವಲ್ಲ ಅಂತ ಬೇಸರವಾಯಿತು. ಅದೂ ಅಲ್ಲದೆ ಸದಾ ಶಾಂತವಾಗಿರುತ್ತಿದ್ದ ಹುಚ್ಚ ಅನಂತನನ್ನು ಹಾವಿಗೆ ಬಡಿದ ಹಾಗೆ ಆ ಗೂಡಂಗಡಿಯ ಮಾಲೀಕ ದೊಣ್ಣೆಯಿಂದ ಬಡಿದದ್ದು ನನಗೂ ಹೆದರಿಕೆಯಾಗುವಂತೆ ಮಾಡಿತ್ತು ಗೋಪಾಲ ಆತನನ್ನು ರಕ್ಷಿಸಿದ್ದು ನೋಡಿ ಈತ ನನಗಿಂತ ಮಿಗಿಲಾದ ಮನುಷ್ಯ ಅಂತಲೂ ಗೊತ್ತಾಯಿತು.</p>
<p>ಆತನ ಹೆಸರು ಕೇಳಿದೆ. 'ಗೋಪಾಲ ಸಾರ್' ಅಂದ. 'ಮಕ್ಕಳು ಎಲ್ಲಿದ್ದಾರೆ' ಎಂದು ಕೇಳಿದೆ. 'ಇಲ್ಲ ಸಾರ್. ಇಲ್ಲೇ ಒಬ್ಬ ಇದ್ದಾನೆ ನೋಡಿ. ಒಟ್ಟು ಐದು ಜನ ಸಾರ್, ಇನ್ನು ನಾಲ್ಕು ಮಕ್ಕಳು ಅಲ್ಲೇ ಕನ್ನಡ ಸಂಘದ ಕಟ್ಟೆಯಲ್ಲಿ ಮಲಗಿದ್ದಾರೆ' ಅಂತ ಹೇಳಿದ. ಆತ ಹೇಳಿದ್ದು ಇನ್ನೂ ನಾಲಕ್ಕು ನಾಯಿಗಳ ಬಗ್ಗೆ ಅಂತ ಗೊತ್ತಾಗಲಿಲ್ಲ. ಆತ 'ಇಲ್ಲೇ ಒಬ್ಬ ಇದ್ದಾನೆ' ಅಂತ ಕರಿಯ ಎಂಬ ಹೆಸರಿನ ನಾಯಿಯನ್ನು ತೋರಿಸಿದ ಮೇಲೆ ಗೊತ್ತಾಯಿತು. ಅಲ್ಲಿಯವರೆಗೆ ನನಗೆ ಈ ತ.ರಾ.ಸು. ವೃತ್ತದಲ್ಲಿ ಬೈಕಿನ ರಿಮ್ಮು ಒರೆಸುವ ಗೋಪಾಲನಿಗೂ ಕರಿಯ ಎಂಬ ಈ ನಾಯಿಗೂ ಯಾವುದೇ ಸಂಬಂಧವಿದೆ ಎಂದೂ ಗೊತ್ತಿರಲಿಲ್ಲ. ಸರಕಾರದವರು ಎಲ್ಲ ಬೀದಿನಾಯಿಗಳನ್ನು ಬಂಧಿಸಿ ಕೊಂಡು ಹೋಗಿದ್ದರೂ ಈ ಕರಿಯ ನಾಯಿ ಆರಾಮಾಗಿ ಇಲ್ಲಿ ಹೇಗೆ ಕೂತಿರುತ್ತದೆ ಎಂದು ಆಶ್ಚರ್ಯ ಪಟ್ಟುಕೊಳ್ಳುತ್ತಿದ್ದೆ.</p>
<p><a href="http://mysorepost.files.wordpress.com/2007/05/gopala-003.jpg" title="gopala-003.jpg"><img src="http://mysorepost.files.wordpress.com/2007/05/gopala-003.jpg" alt="gopala-003.jpg" /></a></p>
<p>ಯಾವಾಗಲೂ ಶಾಂತವಾಗಿರುವ ಆ ಅನಂತನಿಗೆ ಈವತ್ತು ಏಕೆ ಹೀಗೆ ಸಿಟ್ಟು ಬಂತು ಎಂದು ಕೇಳಿದೆ. 'ಇಲ್ಲ ಸಾರ್ ಬಹಳ ಒಳ್ಳೆಯವನು. ನನ್ನ ಜೊತೆಯಲ್ಲೇ ಜೈಲಿನಲ್ಲಿದ್ದ ಸಾರ್. ಬಾಳಾ ಒಳ್ಳೆಯವನು ಸಾರ್. ಆದರೆ ಹುಚ್ಚ. ಮಂಗಳೂರಿನ ಹತ್ತಿರ ಆತನ ತಾತನಿಗೆ ದೊಡ್ಡ ದ್ರಾಕ್ಷಿ ತೋಟ ಇತ್ತು. ಆಸ್ತಿ ಜಗಳ ಬಂತು ಸಾರ್ ಯಾರನ್ನೋ ಕೊಂದು ಬಿಟ್ಟ ಪಾಪ. ಒಳ್ಳೆಯವನು. ನನಗೆ ಬರೀ ನಾಲ್ಕು ಜನ ದೋಸ್ತಿಗಳು ಸಾರ್ ಈ ಲೋಕದಲ್ಲಿ. ಅದರಲ್ಲಿ ಅನಂತ ಒಬ್ಬ ಸಾರ್. ಪಾಪ ಈವತ್ತು ಬಡಿದು ಸಾಯಿಸ್ತಾ ಇದ್ರು' ಎಂದು ಅಲ್ಲಿದ್ದ ಎಲ್ಲರಿಗೂ ಅಶ್ಲೀಲವಾಗಿ ಬೈದು ನನ್ನ ಕೈಯಲ್ಲಿದ್ದ ಸಿಗರೇಟು ಇಸಕೊಂಡು ಆರಾಮಾಗಿ ಸೇದತೊಡಗಿದ.</p>
<p>'ಗೋಪಾಲ ಈವತ್ತು ಒಂದು ರೂಪಾಯಿ ಸಾಕಾ, ಇನ್ನೂ ಬೇಕಾ ಎಷ್ಟು ಬೇಕಾದರೂ ಕೇಳು' ಅಂದೆ. ನನಗೂ ಈ ಹಾಳು ಹಣದ ಬಗ್ಗೆ ಜಿಗುಪ್ಸೆ ಬಂದಿತ್ತು. ಆತನೂ ಅದನ್ನೇ ಹೇಳಿದ 'ಹಣ ಯಾರಿಗೆ ಬೇಕು ಸಾರ್. ನಮ್ಮಮ್ಮ ಸ್ಟಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿದ್ರೆ ಅದು ನನಗೆ ಬೇಕಾ ಸಾರ್, ನೀವು ಸುಮ್ಮನೆ ಹೋಗಿ ಸಾರ್' ಎಂದು ನಕ್ಕ. ಆತ ನಕ್ಕದ್ದನ್ನು ಅದೇ ಮೊದಲು ನೋಡಿದ್ದು. ಖುಷಿಯಾಯಿತು.</p>
<p>'ಗೋಪಾಲಾ, ನಿನ್ನ ಸ್ಟೋರಿ ಹೇಳ್ತೀಯಾ; ಹೇಳು ಸಿನೆಮಾ ಮಾಡುತ್ತೇನೆ. ಅದರಲ್ಲಿ ಹಣಬಂದರೆ ನನಗೆ ಅರ್ಧ ನಿನಗೆ ಅರ್ಧ' ಎಂದು ಹುಚ್ಚುಚ್ಚಾಗಿ ಮಾತನಾಡುತ್ತಾ ಹೋದೆ. 'ಇಲ್ಲಿ ಬೇಡಾ ಸಾರ್, ಒಂಟಿಕೊಪ್ಪಲು ಮೂರನೇ ಕ್ರಾಸ್ ಸಿಮೆಂಟ್ ಅಂಗಡಿ ಪಕ್ಕ ಕನ್ನಡ ಸಂಘದ ಕಟ್ಟೆ ಇದೆ ಸಾರ್. ಅಲ್ಲಿ ಮಲಗಿರ್ತೀನಿ. ಎಬ್ಬಿಸಿ. ಹೇಳ್ತೇನೆ. ಅವನವ್ವನ್ ಕಥೆಯಾ' ಎಂದು ಸಿಗರೇಟು ಆರಿಸಿ ಉಳಿದ ತುಂಡನ್ನು ಕಿವಿಯ ಸಂದಿಗೆ ಸಿಕ್ಕಿಸಿ ಕರಿಯ ಎಂಬ ನಾಯಿಯನ್ನು ಎಬ್ಬಿಸಿ ಮಾಯವಾದ.<br />
ನಿನ್ನೆ ಮಧ್ಯಾಹ್ನ ತುಂಬ ಹೊತ್ತು ಆತನನ್ನು ಹುಡುಕಿಕೊಂಡು ಅಲೆದಾಡಿದೆ. ಎಲ್ಲರೂ ನನ್ನನ್ನು ಹುಚ್ಚನಂತೆ ನೋಡುತ್ತಿದ್ದರು.</p>
<p> 'ಗೋಪಾಲ ಹುಚ್ಚ ಸಾರ್' ಅಂದರು. 'ಕಳ್ಳ ಸಾರ್ ಜೈಲಿಗೆ ಹೋಗಿ ಬಂದಿದ್ದ' ಅಂದರು. 'ಒಳ್ಳೆಯವನು ಸಾರ್ ಮದುವೆ ಯಾದವಳು ಮೋಸ ಮಾಡಿದಳು ಸಾರ್, ಅದಕ್ಕೆ ಹೀಗಾದ ಸಾರ್' ಅಂದರು. 'ಬಾಳಾ ಚೆನ್ನಾಗಿ ಚಿತ್ರ ಬರೀತಿದ್ದ ಸಾರ್' ಅಂದರು. 'ಸೈಕಲ್ ಅಂಗಡಿ ಇಟ್ಟುಕೊಂಡಿದ್ದ ಸಾರ್. ಸೈಕಲ್ ಅಂಗಡಿಯಲ್ಲಿ ಕ್ಯಾರಂಬೋರ್ಡ್ ಇಟ್ಟುಕೊಂಡಿದ್ದ ಸಾರ್ ನಾವೆಲ್ಲಾ ಅಲ್ಲಿ ಆಡುತ್ತಿದ್ದೆವು' ಅಂದರು. 'ಸಾರ್ ಅವರು ನೀಲಗಿರಿಯ ಗೌಡರು ಸಾರ್, ಬಹಳ ಹಿಂದೆ ನಾಗಮಂಗಲ, ಮಂಡ್ಯದ ಕಡೆ ಬರ ಬಂದಾಗ ಅವರ ಹಿರಿಯರು ನೀಲಗಿರಿಯ ಕಡೆ ವಲಸೆ ಹೋಗಿದ್ದರು. ಅವರಲ್ಲಿ ಈಗಲೂ ಕೆಲವರು ಎಸ್ಟೇಟಲ್ಲಿ ಹೆಲಿಕಾಪ್ಟರ್ ಇಟ್ಟುಕೊಂಡಿದ್ದಾರೆ' ಅಂದರು. 'ಅವರು ಒಬ್ಬ ಆರೇಳು ಅಣ್ಣತಮ್ಮಂದಿರು ಎಲ್ಲರೂ ಚೆನ್ನಾಗಿದ್ದಾರೆ ಇವನೊಬ್ಬನು ಮಾತ್ರ ಹೀಗಾದ ಬಾಳ ಕುಡುಕ ಸಾರ್ ಅವನು. ನಾಯಿ ಸಾಕೋದು ನಮಗಾಗೊಲ್ಲ ಸಾರ್' ಅಂದರು. 'ಸಾರ್ ನಾಯಿ ಜೊತೇಲೇ ತಟ್ಟೆಯಲ್ಲಿ ಊಟ ಮಾಡುತ್ತಾನೆ. ಒಂದೇ ಲೋಟದಲ್ಲಿ ನಾಯಿ ಜೊತೆ ನೀರು ಕುಡೀತಾನೆ ಸಾರ್ ಅಸಹ್ಯ' ಅಂದರು. ಅವರೆಲ್ಲರಿಗೂ ನಾನು ಆ ನಡು ಮಧ್ಯಾಹ್ನ ಮರಳು ಗೋಪಾಲನನ್ನು ಹುಡುಕಿಕೊಂಡು ಓಡಾಡುತ್ತಿರುವುದನ್ನು ನೋಡಿ ಅಚ್ಚರಿಯಾಗಿತ್ತು. ಆಮೇಲೆ ಆಕಾಶವಾಣಿಯವನು ಎಂದು ಗೊತ್ತಾದ ಮೇಲೆ ಓ ಹಾಗಾ ಎಂದು ಸುಮ್ಮಗಾಗಿದ್ದರು. ನಾನು ಗೋಪಾಲನನ್ನು ಹುಡುಕಿ ಬೇಜಾರಾಗಿ ಮರಳಿ ಬಂದಿದ್ದೆ. ಮತ್ತೆ ಸಂಜೆ ಚಿರಿಚಿರಿ ಮಳೆಯಲ್ಲಿ ಇನೊಮ್ಮೆ ಹುಡುಕಿದೆ. ಹೋಗಿ ನೋಡಿದರೆ ಗೋಪಾಲ ಕಂದುಬಣ್ಣದ ಇನ್ನೊಂದು ನಾಯಿಯ ಜೊತೆ ಮೋರಿ ಕಟ್ಟೆಯೊಂದರಲ್ಲಿ ತಲೆಯ ಮೇಲೆ ಕೈಇಟ್ಟುಕೊಂಡು ಕುಳಿತಿದ್ದ. ಏನು ಯೋಚನೆ ಎಂದು ಕೇಳಿದೆ. 'ಏನೂ ಇಲ್ಲ ಸಾರ್.ಬೇಜಾರಾಗಿತ್ತು' ಅಂತ ಎದ್ದುಬಂದ.</p>
<p>ಆಮೇಲೆ ಆತ ಯಾವುದೋ ಮುಚ್ಚಿದ ಅಂಗಡಿಯೊಂದರ ಜಗಲಿಯಲ್ಲಿ ಕುಳಿತು ನನ್ನ ಜೊತೆ ಬಹಳ ಹೊತ್ತು ಏನೇನೋ ಮಾತನಾಡಿದ. 'ಅಪ್ಪ ಬಡ್ಡಿಮಗ ಸಾರ್ ಬಾಳಾ ಹೊಡೀತಿದ್ದ ಸಾರ್' ಅಂದ. 'ಹೆಂಗಸರು ದೇವರು ಸಾರ್. ಪಾಪ. ಆದ್ರೂ ಏನೋ ತಪ್ಪು ಮಾಡ್ತಾರೆ' ಅಂದ. 'ಸುಮ್ಮನೆ  ಆಲದ ಕಟ್ಟೆಯಲ್ಲಿ ಮಲಗಿದ್ದೆ ಸಾರ್. ಪೊಲೀಸರು ಎತ್ತಿಕೊಂಡು ಹೋಗಿ ಜೈಲಿಗೆ ಹಾಕಿದ್ರು ಸಾರ್. ಎಲ್ಲಾ ಕೊಂದಾಕಿ ಬಿಡ್ತಾರೆ ಸಾರ್' ಅಂದ. 'ಎಲ್ಲ ಸುಮ್ನೆ ಸಾರ್ ಈ ಜನ್ಮದಲ್ಲಿ ನಾನು ಏನೂ ಹೇಳೋದಿಲ್ಲ ಸಾರ್. ಈ ಜನ್ಮದಲ್ಲಿ ನಾನು ಏನೂ ಮಾತಾಡಬಾರದು ಅಂತ ಅವನು ಹೇಳಿದ್ದಾನೆ ಸಾರ್' ಅಂದ. 'ಯಾರು' ಅಂತ ಕೇಳಿದೆ 'ಇನ್ನು ಯಾರು ಸಾರ್ ಆ ಭಗವಂತ ಪರಮಾತ್ಮ ಅಂತ' ತುಂಬ ಹೆಸರುಗಳನ್ನು ಹೇಳಿದ.</p>
<p> 'ನಾಯಿ ಯಾಕೆ ಸಾಕ್ತೀಯಾ?' ಅಂತ ಕೇಳಿದೆ. 'ನಾಯಿಗಳಿಗೆ ಬೇರೆ ಯಾರಿದ್ದಾರೆ ಸಾರ್.. ಈ ಕರಿಯನನ್ನ ನೀವು ಸಾಕ್ತೀರಾ ಸಾರ್. ಇವನಿಲ್ಲದಿದ್ದರೆ ನಾನು ಎಲ್ಲಿಗೋ ಹೊರಟು ಹೋಗ್ತಿದ್ದೆ. ಸಾಕ್ತೀರಾ ಸಾರ್? ಅಂತ ಪುನಃ ಕೇಳಿದ ನನಗೂ ಅವನ ಹಾಗೆ ಸ್ವಂತ ಮನೆ ಇಲ್ಲ ಅಂತ ಹೇಳಿದೆ 'ಬಿಡಿ ಸಾರ್ ನೀವು ಶ್ರೀಮಂತರು. ಸುಳ್ಳು ಹೇಳ್ತೀರಾ' ಅಂತ ಹೇಳಿದ 'ನಾಯಿ ಒಳ್ಳೇದು ಸಾರ್. ನಾಯಿ ಹಲ್ಲು ಕತ್ತಿಗೆ ಕಟ್ಟಿಕೊಂಡರೆ ಕಾಯಿಲೆ ಬರೋಲ್ಲ ಸಾರ್' ಅಂದ. 'ನಮ್ಮ ಅಮ್ಮ ಒಂದು ಚೀಲ ನಾಯಿ ಹಲ್ಲು ಇಟ್ಟುಕೊಂಡಿದ್ದರು' ಅಂದ.</p>
<p>ಇವನು ಹೇಳುವುದನ್ನೆಲ್ಲಾ ಕೇಳುತ್ತಾ ಇರಲು ನನಗೂ ಮರುಳೇ ಎಂದು ಹೊರಟುಬಂದೆ.</p>
<p>ದಾರಿಯಲ್ಲಿ ಹಿರಿಯರಾದ ಸ್ನೇಹಿತರೊಬ್ಬರ ಕಿರಾಣಿ ಅಂಗಡಿ ಇದೆ. ಇವರೂ ನಾನೂ ಕೆಲವೊಮ್ಮೆ ಕಷ್ಟಸುಖ ಮಾತಾಡ್ತಾ ಕೂತಿರುತ್ತೇವೆ. ಅವರು ರಾಜಕೀಯದ ಹಳೆ ಹುಲಿ. ಸಮಾಜವಾದಿ.ಜೆ. ಪಿ, ಜನತಾಪಾಟರ್ಿ, ವಿಚಾರವಾದ ಅಂತ ಬಹಳ ಬಡಿದಾಡಿದವರು. ಅವರಲ್ಲಿ ಗೋಪಾಲನ ಬಗ್ಗೆ ಕೇಳಿದೆ 'ಬಡ್ಡೀಮಗ, ವಂಡರ್ಪುಲ್ ಮನುಷ್ಯ ಸಾರ್. ನಾಯಿಗಳ ಜೊತೆ ಸೇರಿಕೊಂಡು ಹಾಳಾಗಿ ಹೋದ ಸಾರ್' ಅಂದರು. ಗೋಪಾಲ ಬಹಳ ಚೆನ್ನಾಗಿ ಚಿತ್ರ ಬರೆಯುತ್ತಿದ್ದನಂತೆ. ರಸ್ತೆಯಲ್ಲಿ ಜನತಾ ಪಾರ್ಟಿಯ ನೇಗಿಲು ಹೊತ್ತ ರೈತನ ಚಿತ್ರವನ್ನು ನೀಟಾಗಿ ಬರೀತಿದ್ದನಂತೆ. ಒಂದು ಸಲ ಈತನ ನಾಯಿ ಸಹವಾಸ ನೋಡಿ ಸಹಿಸಲಾರದೆ 'ಸ್ಟುಪಿಡ್' ಅಂತ ಬೈದರಂತೆ 'ನೀವೇ ಸ್ಟುಪಿಡ್' ಅಂತ ತಿರುಗಿ ಬೈದು ಹೋದನಂತೆ.</p>
<p> 'ನಿಮ್ಮ ಜೊತೆ ಇದ್ದ ಯಾರು ಯಾರೆಲ್ಲಾ ಏನೆಲ್ಲಾ ಆದರು. ಸಿ.ಎಂ.ಆದರು, ಪಿ.ಎಂ. ಆದರು. ನೀವು ಮಾತ್ರ ಕಿರಾಣಿ ಅಂಗಡಿಯೊಳಗೆ ಹಾಗೇ ಬೇಳೆ ತೂಗುತ್ತಾ ಇದ್ದೀರಾ ನೀವೇ ಸ್ಟುಪಿಡ್' ಅಂತ ಹೇಳಿದನಂತೆ. ಹಾಗೆ ಹೇಳಿ ಹೋದವನು ಎಷ್ಟೋ ವರ್ಷ ಇರಲೇ ಇಲ್ಲವಂತೆ. ಆಮೇಲೆ ಜೈಲಿನಿಂದ ತಿರುಗಿ ಬಂದನಂತೆ. ಅವರು ಗೋಪಾಲನ ಇನ್ನಷ್ಟು ಕತೆಗಳನ್ನು ಹೇಳುವ ಉತ್ಸಾಹದಲ್ಲಿದ್ದರು.</p>
<p>ಮಳೆ ಜೋರಾಗುವ ಸಂಭವವಿದ್ದರಿಂದ ನಾನು ಹೊರಟುಬಂದೆ.</p>
<p><img src="http://mysorepost.files.wordpress.com/2007/05/gopala-3.jpg" alt="gopala-3.jpg" /></p>
]]></content:encoded>
</item>
<item>
<title><![CDATA[ಮೊದಲು  ಮಲ್ಲಮ್ಮ, ನಡುವಲ್ಲಿ ಸರಸ್ವತಿ ಮತ್ತು ಇದೀಗ ಜುಲೈಕಾ]]></title>
<link>http://mysorepost.wordpress.com/2007/05/11/zulaikah/</link>
<pubDate>Tue, 24 Apr 2007 07:37:20 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/05/11/zulaikah/</guid>
<description><![CDATA[
ನೋಡಲು ಚೂಟಿಯಾಗಿದ್ದ ಆದರೆ ಓದಲು ಅಷ್ಟೇನೂ ]]></description>
<content:encoded><![CDATA[<p align="left"><strong><img src="http://mysorepost.files.wordpress.com/2007/05/zulika4.jpg" alt="zulika4.jpg" /></strong></p>
<p align="left"><strong>ನೋ</strong>ಡಲು ಚೂಟಿಯಾಗಿದ್ದ ಆದರೆ ಓದಲು ಅಷ್ಟೇನೂ ಚುರುಕಾಗಿರದ ನಮ್ಮ ಸಂಬಂಧಿಕರ ಹುಡುಗಿಯೊಬ್ಬಳನ್ನು ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ಒಂದು ದಿನ ಸಂಜೆ ಎಲ್ಲಿಯೋ ತಿರುಗಾಡಲು ಹೋಗಿದ್ದ ನಾನು ತಿರುಗಿ ಬಂದಾಗ ಕತ್ತಲಾಗುತ್ತಿತ್ತು. ಆ ಹುಡುಗಿಗೆ ಗಂಡು ಹುಡುಕಿಕೊಂಡು ಬಂದ ಮಹಿಳೆಯರೊಬ್ಬರು ನನಗಾಗಿ ಕಾಯುತ್ತಾ ಕುಳಿತಿದ್ದರು. ಗಂಡು ಹುಡುಕುವುದು, ಮದುವೆ ಮಾಡಿಸುವುದು ಇತ್ಯಾದಿಗಳಲ್ಲಿ ಅಷ್ಟೇನೂ ಆಸಕ್ತಿ ಇರದ ನಾನು ಒಂದು ತರಹದ ನಿರಾಸಕ್ತಿಯಿಂದಲೇ ಆಕೆಯನ್ನು ಏನು ಮಾತಾಡಿಸುವುದು ಎಂದು ಯೋಚಿಸುತ್ತಿದ್ದೆ. ಮದುವೆಯ ವಯಸ್ಸೇನೂ ಆಗಿರದಿದ್ದ ಸಂಬಂಧಿಕರ ಹುಡುಗಿ ಬಿಸಿಲು ಚಾವಣಿಯಲ್ಲಿ ಮಕ್ಕಳೊಡನೆ ಜೂಟಾಟ ಆಡುತ್ತಾ ಕುಳಿತಿದ್ದಳು.</p>
<p align="left">ಒಳಬಂದವನನ್ನು ಕಂಡು ಆ ಮಹಿಳೆ ಎದ್ದು ನಿಂತು ತನ್ನ ಹೆಸರು ಜುಲೈಕಾ ಎಂದೂ ತನ್ನ ಮಗ ಪಶ್ಚಿಮಾ ಆಫ್ರಿಕಾದ ಯಾವುದೋ ದೇಶವೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿರುವನೆಂದೂ, ಅವನು ಒಂದುವರ್ಷದಲ್ಲಿ ಮೈಸೂರಿಗೆ ಬರುತ್ತಿರುವನೆಂದೂ, ನಮ್ಮ ಹುಡುಗಿಯ ಭಾವಚಿತ್ರವೊಂದು ಇದ್ದರೆ ಆತನಿಗೆ ಕಳುಹಿಸಿಕೊಡಬೇಕಿತ್ತೆಂದೂ, ಅದಕ್ಕಾಗಿ ಬಂದಿರುವುದಾಗಿಯೂ ಹೇಳಿದ್ದರು. ಆಕೆಯ ಮುಖ ಚಹರೆ, ನಡೆನುಡಿ, ಹಾವ ಭಾವ ಮತ್ತು ಆಕೆ ಆಡುತ್ತಿದ್ದ ಕನ್ನಡ ನುಡಿಯ ಶೈಲಿ ಇವುಗಳಿಗೂ ಮತ್ತು ಆಕೆಯ ಜುಲೈಕಾ ಎಂಬ ಹೆಸರಿಗೂ ಯವುದೇ ತರಹದ ತಾಳಮೇಳಗಳು ಗೋಚರಿಸುತ್ತಿರಲಿಲ್ಲ.</p>
<p align="left">ನೋಡಿದರೆ ಅವರು ಯಾವುದೋ ಹಳೆಯ ಕಾಲದ ಅಭಿನೇತ್ರಿಯಂತೆ ಕಾಣಿಸುತ್ತಿದ್ದರು. ಆಮೇಲೆ ಆಕೆ ತೀರಿಹೋಗಿರುವ ತನ್ನ ಪತಿಯ ಹೆಸರನ್ನು ಹೇಳಿದರು. ಆ ಹೆಸರು ಕೇಳಿದ ಮೇಲೆ ನನಗೆ ಅದು ಖಾತರಿಯಾಯಿತು. 'ನಿಮ್ಮ ಹಳೆಯ ಹೆಸರು ಸರಸ್ವತಿ ಎಂದಿರಬೇಕಲ್ಲವೇ?' ಅಂದೆ. 'ಹೌದು' ಎಂದು ಆಕೆ ನಾಚಿಕೊಂಡರು. 'ನಿಮ್ಮ ಮಕ್ಕಳ ತಂದೆ ಬಿ. ಶೇಖ್ ಚಾಂದ್ ತೀರಿ ಹೋಗಿದ್ದಾರೆ ಅಲ್ಲವೇ' ಅಂದೆ. 'ಹೌದು' ಎಂದರು 'ಹಾಗಾದರೆ ಕೂತುಕೊಳ್ಳಿ ಒಂದು ನಿಮಿಷ' ಎಂದು ಒಳಕ್ಕೆ ಹೋಗಿ ಮುಖ ತೊಳೆದುಕೊಂಡು ಬಂದು ಅವರ ಜೊತೆ ಬಹಳ ಹೊತ್ತು ಮಾತನಾಡಿದೆ.</p>
<p align="left">ನಿನ್ನೆ ಸಂಜೆ ಆಫೀಸಿನಲ್ಲಿ ಕುಳಿತಿರುವಾಗ ಸರಸ್ವತಿ ಅಲಿಯಾಸ್ ಜುಲೈಕಾ ಅವರ ಮಗ ಆಫ್ರಿಕಾದಿಂದ ಬಂದವನು ನನ್ನನ್ನು ಕಾಣಲು ಬಂದಿದ್ದ. ಆತನಿಗೆ ಕಂಪ್ಯೂಟರ್ ಅನಿಮೇಷನ್ಗಾಗಿ ಒಳ್ಳೆಯ ಇಂಗ್ಲಿಷ್ ದ್ವನಿಯುಳ್ಳ ಯಾರಾದರೂ ಬೇಕಾಗಿತ್ತು. ನನಗೆ ಯಾರಾದರೂ ಗೊತ್ತಿರಬಹುದು ಎಂದು ಬಂದಿದ್ದ. ನನಗೆ ಈತ ಜುಲೈಕಾ ಅವರ ಪುತ್ರ ಎಂದು ಗೊತ್ತಾಯಿತು. ನನಗೆ ಸಂಬಂಧಿಕನಾಗಬೇಕಿದ್ದವನು. 'ತಾಯಿ ಜುಲೈಕಾ ಹೇಗಿದ್ದಾರೆ?'ಎಂದು ಕೇಳಿದೆ. 'ಆರಾಮವಾಗಿದ್ದಾರೆ' ಎಂದು ಹೇಳಿದ.</p>
<p align="left">ಆತನನ್ನು  ಸುಮ್ಮನೇ ಮಾತನಾಡಿಸಿ ಕಳಿಸಿದವನು ನಿನ್ನೆ ರಾತ್ರಿ ಜುಲೈಕಾರವರನ್ನು ಕಾಣಲು ಹೋದೆ. ಹೋದವನು ಅವರ ಕಥೆಯನ್ನು ಇನ್ನೊಮ್ಮೆ ಕೇಳಿ ಬಂದೆ. ಅವರು ಹೇಳಿದ್ದನ್ನು ಹಾಗೆಯೇ ನಿಮ್ಮ ಮುಂದಿಡುತ್ತಿದ್ದೇನೆ.<!--more--></p>
<p align="left">ಜುಲೈಕಾ ಅವರ ಮೂಲದ ಹೆಸರು ಮಲ್ಲಮ್ಮ. ಅವರ ಮನೆ ದೇವರು ಮಲ್ಲಿಕಾರ್ಜುನ ನಿಂದಾಗಿ ಅವರಿಗೆ ಆ ಹೆಸರು ಬಂದಿದೆ. ಕುರುವತ್ತಿ ಮಲ್ಲಯ್ಯ, ಮೈಲಾರಿ ಲಿಂಗ ಎಂದೂ ಆತನನ್ನು ಪೂಜಿಸುತ್ತಾನೆ. ಮಲ್ಲಮ್ಮ ಕೊಪ್ಪಳದ ಬಳಿಯ ಒಂದು ಹಳೆಯ ಗ್ರಾಮದ ಹಳೆಯ ವೀರಶೈವ ಕುಟುಂಬಕ್ಕೆ ಸೇರಿದವರು. ಆ ಊರಿನಲ್ಲಿ ನಡೆಯುವ ಮಹಮ್ಮಾಯಿಯ ಜಾತ್ರೆ ಇತಿಹಾಸ ಪ್ರಸಿದ್ಧ.</p>
<p align="left">ಮಲ್ಲಮ್ಮನಿಗೆ ಆರುವರ್ಷದಿಂದಲೂ ನಾಟಕದ ಹುಚ್ಚು. ಪುಟ್ಟ ಬಾಲಕಿಯಾಗಿರುವಾಗಲೇ ಜಂಪರ್ ಲಂಗವನ್ನು ಉಲ್ಟಾ ಮಾಡಿ ಕಚ್ಚೆಯಂತೆ ಕಟ್ಟಿಕೊಂಡು, ತಂದೆಯ ರುಮಾಲನ್ನು ಉರಿಹೊಡೆದು ಸೊಂಟದ ಸುತ್ತ ನೆರಿಗೆ ಮಾಡಿ ಸುತ್ತಿಕೊಂಡು, ರೊಟ್ಟಿ ತಟ್ಟುವ ಹಂಚಿನ ತಳದ ಮಸಿಯನ್ನು ವಿಭೂತಿಯಂತೆ ಬಳಿದುಕೊಂಡು, ಮುಖವನ್ನು ಉಫ್ ಅಂತ ಹನುಮಂತನ ಹಾಗೆ ಮಾಡಿಕೊಂಡು ಪುಟ್ಟ ಆಂಜನೇಯಳಾಗಿ ಕುಣಿಯುತ್ತಿದ್ದಳಂತೆ. ಅವರ ತಾತನ ಕಾಲಕ್ಕೆ ಎಂಟು ಎತ್ತಿನ ಕಟ್ಟೆಯಿತ್ತಂತೆ. ಅದು ಪಾಲಾಗಿ ನಾಲ್ಕು ಎತ್ತಿನ ಕಟ್ಟೆಯೊಂದು ತಂದೆಯ ಪಾಲಿಗೆ ಬಂದಿತ್ತಂತೆ. ಮಲ್ಲಮ್ಮ ದಿನವಿಡೀ ಅದರ ಮೇಲೆ ಹತ್ತಿ ಹನುಮಂತನಂತೆ ಜಿಗಿಯುತ್ತಿದ್ದಳಂತೆ. ಮನೆಗೆ ಬಂದು ಹೋಗುವವರೆಲ್ಲರೂ ಅವಳನ್ನು ನೋಡಿ ನಗುತ್ತಿದ್ದರಂತೆ.</p>
<p align="left">ಅವರ ಹಳ್ಳಿಯಲ್ಲಿ ಒಬ್ಬಾಕೆ ನಾಟಕದ ನಟಿಯೊಬ್ಬಳು ಹೋಟೆಲ್ಲು ಇಟ್ಟುಕೊಂಡಿದ್ದಳಂತೆ. ಅವಳ ಒಬ್ಬ ತಮ್ಮ ಸನ್ಯಾಸಿಯಾಗಿ ಊರು ಬಿಟ್ಟು ಹೋಗಿದ್ದನಂತೆ. ಇನ್ನೊಬ್ಬಾತ ಹಾಮರ್ೋನಿಯಂ ಕಲಿತು ಅಕ್ಕನ ಹಾಡಿಗೆ ಸಾಥ್ ನಿಡುತ್ತಿದ್ದನಂತೆ. ಆ ನಟಿ ಆರುವರ್ಷದ ಮಲ್ಲಮ್ಮನ ಆಂಜನೇಯ ವೇಷವನ್ನು ಮೆಚ್ಚಿಕೊಂಡು ಈಗಲೇ ಸುರಸುಂದರಿಯಂತಿರುವ ಈ ಬಾಲಕಿ ದೊಡ್ಡವಳಾದ ಮೇಲೆ ಖ್ಯಾತ ಅಭಿನೇತ್ರಿಯಾಗುವಳು ಎಂದು ಭವಿಷ್ಯ ನುಡಿದು ಆಕೆಯನ್ನು ಕರೆದುಕೊಂಡು ಹೋಗಿ ನಾಟಕದಲ್ಲಿ ಲೋಹಿತಾಶ್ವನ ಪಾತ್ರ ಕೊಟ್ಟಳಂತೆ.<br />
ಆ ನಾಟಕ ನಡೆದದ್ದು ಮಾನ್ಷಿಯಲ್ಲಿ. ತಾಯಿ ತಾರಾವತಿಯ ಪಾತ್ರವನ್ನು ಮುರುಗೋಡು ರೇಣಮ್ಮ ವಹಿಸಿದ್ದರಂತೆ. ತಾಯಿಯಿಂದ ಅಗಲುವಾಗ ಬಾಲಕ ಲೋಹಿತಾಶ್ವ 'ಅಮ್ಮಾ ನನ್ನನ್ನು ಅಗಲಬೇಡ. ನಿನ್ನ ಬಿಟ್ಟು ನಾನು ಇರಲಾರೆ' ಎಂದು ಅಳುತ್ತಾ ಹೇಳಬೇಕಿತ್ತಂತೆ. ಮಲ್ಲಮ್ಮ ತಾಯಿಯನ್ನು ಬಿಟ್ಟು ಬಂದ ಖುಷಿಯಿಂದ ಅದನ್ನು ನಗುತ್ತಾ ಹೇಳಿದಳಂತೆ. ರೇಣುಕಮ್ಮ ಪ್ರೇಕ್ಷಕರಿಗೆ ಗೊತ್ತಾಗದೆ ಹಾಗೆ ಮಲ್ಲಮ್ಮನನ್ನು ಜೋರಾಗಿ ಗಿಂಡಿದಳಂತೆ. ಲೋಹಿತಾಶ್ವ ಆಗ 'ಅಮ್ಮಾ ಹೋಗಬೇಡ' ಎಂದು ಅಳುತ್ತಾ ಹೇಳಿದಳಂತೆ. ನಾಟಕ ಮುಗಿಸಿ ಊರಿಗೆ ಬಂದ ಮಲ್ಲಮ್ಮ ಶಾಲೆಯಲ್ಲಿ ಈ ಘಟನೆಯನ್ನು ನಗುತ್ತಾ ತನ್ನ ಗೆಳತಿಯರ ಬಳಿ ಹೇಳುತ್ತಿದ್ದಳಂತೆ.</p>
<p align="left"> ಇನ್ನೊಂದು ದೃಶ್ಯದಲ್ಲಿ ಲೋಹಿತಾಶ್ವ ಸಾಯಬೇಕು - ಸತ್ತು ಒಂದು ಗಂಟೆಯ ಬಳಿಕ ಮುನಿಗಳೊಬ್ಬರು ಕಮಂಡಲದಿಂದ ನೀರು ಚಿಮುಕಿಸುವಾಗ ಲೋಹಿತಾಶ್ವ ಜೀವ ತಳೆದು ಏಳಬೇಕು. ಆದರೆ ಆ ಪಾತ್ರ ಮಾಡುತ್ತಿದ್ದ ಮಲ್ಲಮ್ಮ ಸ್ಟೇಜಿನಲ್ಲಿ ನಿದ್ದೆ ಹೋಗಿದ್ದಳಂತೆ. ನೀರು ಚಿಮುಕಿಸಿದರೂ ಲೋಹಿತಾಶ್ವ ಏಳದಿರುವುದನ್ನು ನೋಡಿ ಮುನಿಗಳು ಕಾಲಿನ ಹೆಬ್ಬೆರೆಳಿನಿಂದ ಮಲ್ಲಮ್ಮಳ ತೊಡೆಯನ್ನು ತುಳಿದರಂತೆ. ಆಗ ಮಲ್ಲಮ್ಮ ಕಿರುಚುತ್ತಾ ಎದ್ದು ನಿಂತಳಂತೆ.<br />
ನಿನ್ನೆಯ ಇರುಳು ಮೈಸೂರಿನಲ್ಲಿ ಮಳೆ ಬರುತ್ತಿತ್ತು. ಜುಲೈಕಾ ತಮ್ಮ ಪುಟ್ಟ ಮನೆಯಲ್ಲಿ ನನ್ನನ್ನು ಕುಳ್ಳಿರಿಸಿಕೊಂಡು, ನಡುನಡುವಲ್ಲಿ ಅಳುತ್ತಾ, ಒಮ್ಮೊಮ್ಮೆ ನಗುತ್ತಾ, ಕಣ್ಣೀರು ಒರೆಸಿಕೊಳ್ಳುತ್ತಾ,  ಕೆಲವೊಮ್ಮೆ ವೇದಾಂತಿಯಂತೆ  ಮಾತನಾಡುತ್ತಾ ಮಲ್ಲಮ್ಮ ಎಂಬ ಹುಡುಗಿ ಸರಸ್ವತಿ ಎಂಬ ಹೆಸರಿನಲ್ಲಿ ಅಭಿನೇತ್ರಿಯಾಗಿದ್ದು, ಆಮೇಲೆ ಶೇಖ್ಚಾಂದ್ ಎಂಬ ರಂಗನಟನನ್ನು ಮದುವೆಯಾಗಿಜ ಜುಲೈಕಾ ಆಗಿದ್ದು ಎಲ್ಲವನ್ನು ನಾಟಕವೊಂದರ ದೃಶ್ಯಗಳಂತೆ ನನಗೆ ಹಾವಭಾವ ಗಳ ಸಮೇತ ವಿವರಿಸುತ್ತಿದ್ದರು.<img src="http://mysorepost.files.wordpress.com/2007/05/sheikchand-julika.jpg" alt="sheikchand-julika.jpg" /> ಗಂಡನಿಗೆ ಪ್ರೇಮಿಯಾಗಿ' ಹೆಂಡತಿಯಾಗಿ, ಮಗಳಾಗಿ, ತಾಯಿಯಾಗಿ, ಊರೂರು ತಿರುಗುತ್ತಾ ನಾನಾ ಪಾತ್ರಗಳ್ಲಿ ಅಭಿನಯಿಸಿದ್ದು, ನಾಟಕದ ಡೇರೆಗಳಲ್ಲಿಯೇ ಮೂವರು ಗಂಡುಮಕ್ಕಳು ಹುಟ್ಟಿದ್ದು ಬೆಳೆದದ್ದು, ಅವರನ್ನು ಓದಿಸಿ ದೊಡ್ಡವರನ್ನಾಗಿ ಮಾಡಿದ್ದು ಕೊನೆಯ ಮಗ ಮಹಾ ಪ್ರತಿಭಾವಂತನಾಗಿದ್ದ ಸಿಕಂದರ್ ಪಾಷಾ ಕಾಮಾಲೆ ಕಾಯಿಲೆ ಬಂದು, ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ತೀರಿ ಹೋಗಿದ್ದು, ಅದರಿಂದ ತಮಗೆ ಮತಿಭ್ರಮಣೆಯಾಗಿದ್ದು, ಆ ಮತಿಭ್ರಮಣೆಯನ್ನು ಮರೆಸಲೋ ಎಂಬಂತ ಸರ್ವಶಕ್ತನಾದ ಆ ಭಗವಂತ ಈಗ ಏಳುವರ್ಷಗಳ ಹಿಂದೆ  ಪತಿ ಶೇಖ್ ಚಾಂದರ ಪ್ರಾಣವನ್ನು ಕಿತ್ತುಕೊಂಡಿದ್ದು ಎಲ್ಲವನ್ನೂ ಹೇಳುತ್ತಿದ್ದರು. ನಡುನಡುವೆ ಪಾತ್ರಗಳ ಸಾಲುಗಳನ್ನು ಹೇಳುತ್ತಿದ್ದರು. ನಾಟಕದ ಹಾಡುಗಳನ್ನು ಹಾಡುತ್ತಿದ್ದರು. ಕೊನೆಯಲ್ಲಿ ನೀನು ಏನು ಬೇಕಾದರೂ ಬರಿ. ನಾನು ಹೇಳಿದ್ದೆಲ್ಲವನ್ನೂ ಬರಿ. ಆದರೆ ಕೊಪ್ಪಳದ ಬಳಿಯ ತನ್ನ ಹಳ್ಳಿಯ ಹೆಸರನ್ನು ಮಾತ್ರ ಬರೆಯಬೇಡ ಎಂದು ಹೇಳಿ ಆ ಮಳೆಯಲ್ಲಿಯೇ ನನ್ನನ್ನು ಕಳಿಸಿದ್ದರು.</p>
<p align="left">ಮಲ್ಲಮ್ಮನ ಮೈನೆರೆದಾಗ ಆಕೆ ಗದಗಿನಲ್ಲಿರುವ ಬಸಯ್ಯನವರ ಪಟ್ಟದ ಕಲ್ಲು ನಾಟಕ ಕಂಪೆನಿಯಲ್ಲಿದ್ದಳು. ಆಕೆ ತನ್ನ ಎಂಟು ವರ್ಷದಲ್ಲಿಯೇ ಮನೆಯಿಂದ ಹೇಳದೆ ಕೇಳದೆ ಓಡಿಹೋಗಿದ್ದಳಂತೆ. ಹೋಗುವ ಖಚರ್ಿಗೆ ಕಾಲಿನ ಕಡಗ, ಕೈಯ ಬಳೆ, ಜುಮುಕಿ, ಉಂಗುರ, ಸರ ಎಲ್ಲವನ್ನೂ ಮೂವತ್ತು ರೂಪಾಯಿಗ ಮಾರಿ ತನಗೆ ಯಾರೂ ಇಲ್ಲ ತಾನು ಅನಾಥೆ ಎಂದು ಸುಳ್ಳು ಹೇಳಿ ಬಸಯ್ಯನವರ ಕಾಲಿಗೆ ಬಿದ್ದಳಂತೆ. ಹಾಗೆ ಕಾಲಿಗೆ ಬಿದ್ದ ಮಲ್ಲಮ್ಮನಿಗೆ ಸರಸ್ವತಿ ಎಂಬ ಹೆಸರಿಟ್ಟು ಸಾಕುಮಗಳನ್ನಾಗಿ ಬೆಳೆಸಿ ಅಭಿನೇತ್ರಿಯನ್ನಾಗಿ ಮಾಡಿದರಂತೆ. ಹನ್ನರೆಡು ವರ್ಷಕ್ಕೆ ಸರಸ್ವತಿ ಮೈನೆರೆದಾಗ ಬಸಯ್ಯನವರು ನಿಜ ಹೇಳು ಎಂದು ಹೇಳಿ ಅವಳ ತಂದೆ ತಾಯಿಯರ ಹೆಸರು ತಿಳಿದುಕೊಂಡು ಪುನಃ ಊರಿಗೆ ಕಳುಹಿಸಿದರಂತೆ.<br />
ಊರಿಗೆ ಬಂದ ಮಗಳನ್ನು ಸೇರಿಸಿಕೊಂಡ ಆ ವೀರಶೈವ ತಂದೆ ಆಕೆಗೆ ಹೊಲಿಗೆಯ ಯಂತ್ರವೊಂದನ್ನು ಕೊಡಿಸಿ ಹೊಲಿದು ಕೊಂಡಿರು ಅಂತ ಕೂಡಿಸಿದರಂತೆ. ಯಾರಾದರೂ ಮಗಳು ಇಷ್ಟು ವರ್ಷ ಎಲ್ಲಿ ಕಾಣೆಿಯಾಗಿದ್ದಳು ಎಂದು ಕೇಳಿದರೆ ಕೊಪ್ಪಳಕ್ಕೆ ಹೊಲಿಗೆ ಕಲಿಯಲು ಹೋಗಿದ್ದಳು ಎಂದು ಸುಳ್ಳು ಹೇಳುತ್ತಿದ್ದರಂತೆ.<br />
ಹೀಗೆ ಹೊಲಿಯುತ್ತಾ ಕೂತ ಮಲ್ಲಮ್ಮ ಎಂಬ ಸರಸ್ವತಿಯ ಮುಂದೆ ಒಂದು ದಿನ  ಶೇಖ್ ಚಾಂದ್ ಪ್ರತಕ್ಷರಾಗುತ್ತಾರೆ. ನಾಟಕದ ಹುಚ್ಚು ತಲೆಗೆ ಹತ್ತಿಸಿಕೊಂಡಿದ್ದ ಶೇಖ್ ಚಾಂದ್ ಆಗ ಇನ್ನೂ ಚಿಗುರು ಮಿಸೆಯ ಚೆಲುವ. ಆತನನ್ನು ನೋಡಿಯೂ ನೋಡದವಳಂತೆ ಹೊಲಿಯುತ್ತಾ ಕುಳಿತಿದ್ದವಳನ್ನೂ ಆತನೇ ಮಾತನಾಡಿಸಿದನಂತೆ. ಗದಗಿನ ನಾಟಕದ ಕಂಪೆನಿ ಸೇರಿ ಮಲ್ಲಮ್ಮ ಸರಸ್ವತಿ ಎಂಬ ಹೆಸರಿನಲ್ಲಿ ಖ್ಯಾತಳಾಗಿ ಈಗ ಏನೂ ಆಗದವಳಂತೆ ಹೊಲಿಯುತ್ತಾ ಕೂತಿರುವುದು ಚಾಂದ್ಪಾಷಾನಿಗೆ ಗೊತ್ತಾಗಿತ್ತು. ತನ್ನ ಕನಸಿನ ನಾಟಕ ಕಂಪನಿಯ ನಾಯಕಿಯನ್ನು ಹುಡುಕಿಕೊಂಡು ಆತ ದೂರದ ಕಲಬುರ್ಗಿಯಿಂದ ಕೊಪ್ಪಳದ ಬಳಿಯ ಆ ಹಳ್ಳಿಗೆ ಬಂದಿದ್ದ. ಆತನನ್ನು ಕಡೆಗಣ್ಣಿನಿಂದ ಗಮನಿಸುತ್ತಿದ್ದ ಸರಸ್ವತಿಗೆ ಕಲ್ಬುರ್ಗಿಯ ಬಸವೇಶ್ವರ ದೇವಾಲಯವೂ ಬಿಜಾಪುರದ ಗೋಳಗುಮ್ಮಟವೂ ಏಕಕಾಲಕ್ಕೆ ನೆನಪಾದವಂತೆ.</p>
<p align="left">ಆನಂತರ ನಡೆದದ್ದು ಒಂದು ದೊಡ್ಡ ಕತೆ. ನಾಟಕಕ್ಕಿಂತಲೂ ಮಿಗಿಲಾದ, ಕಥೆಗಿಂತಲೂ ರುಧ್ರ ಭಯಂಕರವಾದ, ಆಕಸ್ಮಿಕಗಳಿಗಿಂತಲೂ ಆಕಸ್ಮಿಕಗಳು ತುಂಬಿ ಕೊಂಡಿರುವ ಕಥಾನಕ ಅದು. ಈ ಕಥಾನಕದ ನಾಯಕ ಶೇಖ್ ಚಾಂದ್ ಭೀಮರಾಯನ ಗುಡಿ ಎಂಬ ಊರಿನಲ್ಲಿ ತನ್ನ ಪ್ರಾಣ ಸ್ನೇಹಿತನ ಮಗುವೊಂದನ್ನು ಉಳಿಸಲು ಹೋಗಿ ತಾನು ಆಟೋರಿಕ್ಷಾವೊಂದಕ್ಕೆ ಸಿಲುಕಿ ತೀರಿಹೋದರು. ಅದಕ್ಕಿಂತಲೂ ಮೊದಲು ಕಾಮಾಲೆಗೆ ಸಿಲುಕಿ ಮಗ ಸಿಕಂದರ್ ತೀರಿಹೋಗಿದ್ದ.   <img src="http://mysorepost.files.wordpress.com/2007/05/zulika5.jpg" alt="zulika5.jpg" />ಈಗ ಜುಲೈಕಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿರುವ, ಹಿಂದೆ ಸರಸ್ವತಿ ಎಂಬ ಹೆಸರಿದ್ದ, ಅದಕ್ಕೂ ಮೊದಲು  ಮಲ್ಲಮ್ಮ ಎಂಬ ಬಾಲಕಿಯಾಗಿದ್ದ ಈ ಮಹಿಳೆ ಈಗಲೂ ಪುಟ್ಟ ಹುಡುಗಿಯ  ಹಾಗೆ ನಗುತ್ತಾರೆ. ಅವಕಾಶ ಸಿಕ್ಕರೆ ಈಗಲೂ ಆಂಜನೇಯನ ಹಾಗೆ ಕುಣಿಯಬಲ್ಲೆ ಎಂದು ಅವರ ಕಣ್ಣುಗಳು ಹೇಳುತ್ತವೆ.</p>
<p align="left">`ನೋಡಿ ಮದುವೆ ಸಂಬಂದಕ್ಕಾಗಿ ಬಂದಿದ್ದ ನಿಮ್ಮನ್ನು ಮಾತನಾಡಿಸಲು ಹೋಗಿ ನಿಮ್ಮ ಏನೆಲ್ಲಾ ಸಂಕಟಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ ನನ್ನನ್ನು ಕ್ಷಮಿಸಿ ಎಂದು ಕೇಳಿದೆ.ಅವರು ನಕ್ಕರು. 'ಈಗಲೂ ಕಾಲ ಮೀರಿಲ್ಲ ಆಫ್ರಿಕಾದಿಂದ ಬಂದಿರುವ ನನ್ನ ಮಗನಿಗೆ ಇನ್ನೂ ಹೆಣ್ಣು ಹುಡುಕುತ್ತಿದ್ದೇನೆ,ಯಾರಾದರೂ ಸಾಬರ ಹುಡುಗಿಯರು ಇದ್ದರೆ ಹೇಳಿ' ಎಂದು ಹೇಳಿದರು.</p>
<p align="center">'ಹೇಳುತ್ತೆನೆ. ಆದರೂ ಈ ಮದುವೆ ಗಿದುವೆ ಹುಟ್ಟು ಸಾವು ಇತ್ಯಾದಿ ಆಕಸ್ಮಿಕಗಳು  ನನಗೆ ಯಾಕೋ ಸರಿಯಾಗುವುದಿಲ್ಲ ನಾನು ಯಾವಾಗಲೂ ಇವುಗಳಿಂದ ದೂರ ಇರುತ್ತೇನೆ ಎಂದು ಹೇಳಿ ಅವರಿಂದ ಬೀಳು ಕೊಂಡು ಮಳೆಯಲ್ಲಿ ಬೈಕು ಓಡಿಸುತ್ತಾ ಬಂದಿದ್ದೆ. ನಗುತ್ತಾ ನಟಿಸುತ್ತಿದ್ದ ಈ ನಟಿಯನ್ನು ಭಯಂಕರವಾಗಿ ಗಿಂಡಿ ಅಳುತ್ತಾ ನಟಿಸುವಂತೆ ಮಾಡಿದ ಆ ಭಗವಂತನ ಯೋಚನೆ ಯಾಗುತ್ತಿತ್ತು.<br />
ಈಗ ಇರುಳಲ್ಲಿ ಕುಳಿತುಕೊಂಡು ಯಾವುದೋ ಭಾಷೆಯ   ಸಂಗೀತ ಕೇಳುತ್ತಾ ಇದನ್ನೆಲ್ಲಾ ಬರೆಯುತ್ತಿರುವೆ.</p>
]]></content:encoded>
</item>
<item>
<title><![CDATA[ ಗಾಣಿಗರ ಸಿದ್ಧಮ್ಮನ ಇನ್ಪೋಸಿಸ್ ಕನಸು]]></title>
<link>http://mysorepost.wordpress.com/2007/04/16/siddammainfosys/</link>
<pubDate>Mon, 16 Apr 2007 17:43:49 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/04/16/siddammainfosys/</guid>
<description><![CDATA[&nbsp;

ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವ ನನ್]]></description>
<content:encoded><![CDATA[<p align="left">&#160;</p>
<p style="text-align:center;"><img src="http://mysorepost.files.wordpress.com/2007/04/ajji2.jpg" alt="ajji2.jpg" /></p>
<p><strong>ಮ</strong>ಧ್ಯಾಹ್ನದ ಹೊತ್ತು ನಿದ್ದೆ ಮಾಡುವ ನನ್ನ ಮಗನನ್ನು ನೋಡಿಕೊಳ್ಳಲು ಸಿದ್ಧಮ್ಮ ಎಂಬ ಗಾಣಿಗರ ಅಜ್ಜಿ ಬರುತ್ತಾಳೆ. ಈ ಅಜ್ಜಿಯ ಬೆನ್ನು ಸ್ವಲ್ಪ ಬಾಗಿದೆ. ಸೊಂಟ ಯಾವಾಗಲೂ ಹಿಡಿದುಕೊಂಡಿರುತ್ತದೆ. ಕೀಟಲೆಯಲ್ಲಿ ನನಗಿಂತಲೂ ಒಂದು ಕೈ ಮೇಲೆಯೇ ಇರುವ ನನ್ನ ಮಗ ಒಂದು ಕಣ್ಣು ತೆರೆದುಕೊಂಡು ಇನ್ನೊಂದು ಕಣ್ಣನ್ನು ಮುಚ್ಚಿ ಕಣ್ಣೆದುರು ಕಾಣಿಸುವ ಎಲ್ಲ ಚರಾಚರ ವಸ್ತುಗಳ ಸ್ಪೆಲ್ಲಿಂಗನ್ನು ಹೇಳಿಕೊಂಡು ಕ್ಯಾಟ್ ಅನ್ನುವ ಹೆಸರಲ್ಲಿ 'ಸಿ' ಯಾಕೆ ಬೇಕು? 'ಯು' ಯಿಂದ ಶುರುವಾಗುವುದಾದರೆ ಕೊಡೆಯನ್ನು ಯುಂಬ್ರೆಲಾ ಎಂದು ಕರೆಯಬೇಕಲ್ಲವೇ ಎಂದೆಲ್ಲಾ ಗೊಂದಲ ಮಾಡಿಕೊಂಡು ನಿದ್ದೆ ಬಾರದೆ ಒದ್ದಾಡುತ್ತಿರುತ್ತಾನೆ. ಅವನನ್ನು ಹೆದರಿಸಿ ಬೆದರಿಸಿ ರಮಿಸಿ ನಿದ್ದೆ ಹೋಗಿಸಿ ಸಿದ್ದಮ್ಮ ತಾನೂ ಸುಸ್ತಾಗಿ ತೂಕಡಿಸುತ್ತಾ ಕುಳಿತಿರುತ್ತಾಳೆ.<!--more--></p>
<p align="left">ಮಧ್ಯಾಹ್ನದ ಹೊತ್ತು ಬೇರೆ ಏನೂ ಕೆಲಸವಿಲ್ಲದಿದ್ದರೆ ನಾನು ಆ ಅಜ್ಜಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಅವಳ ಸಂಕಟಗಳನ್ನು ಅವಳ ಬಾಯಿಯಿಂದ ಹೊರತರಿಸಿ ಅವಳ ಸಂಕಟಗಳಿಗೇನಾದರೂ ಪರಿಹಾರ ಒದಗಿಸಬಹುದಾ ಎಂದು ಯೋಚಿಸುತ್ತಿರುತ್ತೇನೆ. ಅಜ್ಜಿ ಮಂಪರಿನಲ್ಲಿ ಹೇಳುವ ಬಹುತೇಕ ಸಂಕಟಗಳಿಗೆ ಈ ಜಗತ್ತಿನಲ್ಲಿ ಪರಿಹಾರಗಳಿಲ್ಲ ಎಂದು ಗೊತ್ತಾಗಿ ಪೆಚ್ಚಾಗಿ ಬಿಡುತ್ತೇನೆ.</p>
<p align="left">ಉದಾಹರಣೆಗೆ ಗಾಣಿಗರ ಸಿದ್ಧಮ್ಮ ಮೊನ್ನೆ ಒಂದು ದಿನ ಮಧ್ಯಾಹ್ನ ನಿದ್ದೆಯ ಮಂಪರಿನಲ್ಲಿ ಮಾತನಾಡುತ್ತಾ, 'ನನ್ನ ಮೊಮ್ಮಗನಿಗೆ ಇನ್ಪೋಸಿಸ್ನಲ್ಲಿ ಒಂದು ಕೆಲಸ ಕೊಡಿಸಿ ಬಿಡಪ್ಪಾ ನಿನಗೆ ಪುಣ್ಯ ಬರುತ್ತೆ, ನಿನ್ನ ಕಾಲು ಕಟ್ಕೊಳ್ತೀನಿ' ಅಂತ ಹೇಳುತ್ತಿದ್ದಳು. ಈ ಮೊಮ್ಮಗ ಏಳನೇ ಕ್ಲಾಸಲ್ಲಿ ಫೈಲಾಗಿ ಈಗ ನಾಲ್ಕು ವರ್ಷವಾಗಿದೆ. ಈತ ಸಿದ್ದಮ್ಮನ ಮೊದಲ ಮಗಳ ಮಗ. ಮೈಸೂರಿನಿಂದ ಹೊರಗೆ ಶ್ರೀರಂಗಪಟ್ಟಣದ ಬಳಿ ಅಪ್ಪನ ಜಮೀನಿನಲ್ಲಿ ಹೊಲ ಉಳುತ್ತಾ ಉಳಿದ ಸಮಯದಲ್ಲಿ ಶಾಲೆಗೆ ಹೋಗುತ್ತಾ ಇದ್ದ. ಮೈಸೂರು ಮಾಹಿತಿ ತಂತ್ರಜ್ಞಾನದ ಕೇಂದ್ರವಾದ ಮೇಲೆ ಜಮೀನಿನ ರೇಟು ಸಿಕ್ಕಾಪಟ್ಟೆ ಏರಿ ಅದು ಗೊತ್ತಿಲ್ಲದ ಈ ಬಾಲಕನ ಅಪ್ಪ ಒಂದಿಷ್ಟು ದುಡ್ಡಿಗೆ ಅದನ್ನು ಅಡ ಇಟ್ಟು ಈ ಜಮೀನು ಈಗ ಯಾರದೋ ಪಾಲಾಗಿದೆ. ಆ ಹುಡುಗ ಪೋಲಿಬಿದ್ದಿದ್ದಾನೆ. ಆದರೆ ಆತ ಒಳ್ಳೆಯ ಹುಡುಗ. ಸಿದ್ದಮ್ಮನಿಗೆ ಅವನನ್ನು ಕಂಡರೆ ಪ್ರೀತಿ. ಇನ್ಪೋಸಿಸ್ನಲ್ಲಿ ತುಂಬಾ ಸಂಬಳ ಸಿಗುತ್ತದೆ ಅಂತ ಸಿದ್ಧಮ್ಮನಿಗೆ ಯಾರೋ ಹೇಳಿದ್ದಾರೆ. ಅದಕ್ಕೆ ಸಿದ್ದಮ್ಮ ತೂಕಡಿಕೆಯ ನಡುವೆಯೇ ಕನಸುಗಳನ್ನು ಕಂಡುಕೊಂಡು ತನ್ನ ಮನದ ಆಸೆಯನ್ನು ನನ್ನೊಡನೆ ಹೇಳಿಕೊಳ್ಳುತ್ತಿದ್ದಾಳೆ.</p>
<p align="left">&#160;</p>
<p style="text-align:center;"><img src="http://mysorepost.files.wordpress.com/2007/04/ajji31.jpg" alt="ajji31.jpg" /></p>
<p align="left">                     ನಾನು ಮಲಗಿರುವ ಮಗನನ್ನೂ, ತೂಕಡಿಸುತ್ತಿರುವ ಅಜ್ಜಿಯನ್ನೂ ಬಿರುಬಿಸಿಲಲ್ಲಿ ಬೆವರುತ್ತಿರುವ ಮೈಸೂರನ್ನೂ ಮತ್ತು ಇನ್ಫೋಸಿಸ್ ಎಂಬ ಕಂಪೆನಿಯನ್ನೂ ಯೋಚಿಸಿಕೊಂಡು ಪೆಚ್ಚಾಗುತ್ತೇನೆ.</p>
<p align="left">ಸಿದ್ದಮ್ಮ ನಿದ್ದೆಯಲ್ಲಿ ಇನ್ನೂ ಏನೇನೋ ಹೇಳುತ್ತಾ, ನನ್ನ ಬಗ್ಗೆಯೂ ಏನೇನೋ ಪ್ರಶ್ನೆಗಳನ್ನು ಕೇಳುತ್ತಾ ಕುಳಿತಲ್ಲೇ ತೂಕಡಿಸಿರುತ್ತಾಳೆ. `ನಿನ್ನ ತಾಯಿಯ ಕಣ್ಣಿನ ಪೊರೆ ಆಪರೇಷನ್ ಮಾಡಿಸಿದ್ದು ಸರಿಯಾಯ್ತೇನಪ್ಪಾ, ನಿಮ್ಮ ಗಂಡಹೆಂಡತಿಯರ ಜಗಳ ಸರಿ ಆಯ್ತೇನಪ್ಪಾ' ಎಂದೆಲ್ಲಾ ಕೇಳುತ್ತಿರುತ್ತಾಳೆ. ನಾನು ಉತ್ತರಿಸುತ್ತೇನೆ. ಸಿದ್ದಮ್ಮನ ಮಂಪರಿಗೂ ನನ್ನ ಎಚ್ಚರಕ್ಕೂ ದೊಡ್ಡ ವ್ಯತ್ಯಸವೇನೂ ಇರುವುದಿಲ್ಲ.</p>
<p align="left">ಎಚ್ಚರವಿರುವಾಗ ಸಿದ್ದಮ್ಮ ಏನೂ ಮಾತನಾಡುವುದಿಲ್ಲ. ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ. 'ಏನೂ ಆಗೋದಿಲ್ಲಾ ಬುಡಪ್ಪಾ...' ಎಂದು ಎಲ್ಲ ಕೆಲಸಗಳನ್ನೂ ಮಾಡುತ್ತಿರುತ್ತಾಳೆ. ಮಗ ನಿದ್ದೆಯಿಂದ ಏಳುವವರೆಗೆ ತಾನೂ ತೂಕಡಿಸುತ್ತಾ ಕಾದಿದ್ದು, ಅವನನ್ನು ಆಟವಾಡಲು ಕಳುಹಿಸಿ, ಇನ್ನೊಂದು ಮನೆಗೆ ಪಾತ್ರೆತೊಳೆಯುವ ಕೆಲಸಕ್ಕೆ ಹೋಗುತ್ತಾಳೆ. ಉಳಿದ ಹೊತ್ತಿನಲ್ಲಿ ಮೈಸೂರಿನ ಕಂದಾಯ, ಆರೋಗ್ಯ ನೋಂದಣಿ, ಬ್ಯಾಂಕ್ ಇತ್ಯಾದಿ ಕಛೇರಿಗಳನ್ನು ಸುತ್ತುತ್ತಾ ತನಗೆ ಇನ್ನೂ ಬರಬೇಕಾದ ರೇಷನ್ಕಾಡರ್್, ವೃದ್ದಾಪ್ಯವೇತನ, ಬ್ಯಾಂಕ್ಸಾಲ ಇತ್ಯಾದಿಗಳಿಗೆ ಓಡಾಡುತ್ತಿರುತ್ತಾಳೆ. ಬಹುಶಃ ಈ ಜನ್ಮದಲ್ಲಿ ಆಕೆಗೆ ಇದು ಯಾವುದೂ ಸಿಗುವುದಿಲ್ಲ.</p>
<p align="left">ರೇಷನ್ ಕಾರ್ಡ್ ಗೆ ಬೇಕಾದ ವಾಸ್ತವ್ಯದ ದೃಢೀಕರಣ ಪತ್ರ ಈಕೆಯ ಬಳಿ ಇಲ್ಲ. ಈಕೆಗೆ ನಾಲ್ಕು ಗಂಡು ಮಕ್ಕಳಿರುವುದರಿಂದ ವೃದ್ದಾಪ್ಯ ವೇತನ ಸಿಗುವುದಿಲ್ಲ. ಸಂಬಳದ ಸರ್ಟಿಫಿಕೇಟ್ ಇಲ್ಲದಿರುವುದರಿಂದ ಬ್ಯಾಂಕ್ ಸಾಲ ಸಿಗುವುದಿಲ್ಲ. ಸಿದ್ದಮ್ಮನಿಗೆ ತನಗೆ ಎಷ್ಟು ವಯಸ್ಸು ಎಂಬುದು ನೆನಪಿಲ್ಲ. ಮದುವೆ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಆಯ್ತು ಎಂಬ ನೆನಪಿದೆ. ಗಂಡ ರಂಗಸ್ವಾಮಿ ಆಗ ಹೇಗಿದ್ದರು ಎಂಬುದು ನೆನಪಿಲ್ಲ. ಗಂಡ ರಂಗಸ್ವಾಮಿ ಹಳ್ಳಿ ಹಳ್ಳಿ ತಿರುಗುತ್ತಾ ಗಂಧದ ಕಡ್ಡಿ ಮಾರುತ್ತಾ ಇದ್ದವನು ಈಗ ಕಳೆದ ಹತ್ತುವರ್ಷಗಳಿಂದ ದೇಹದ ಒಂದು ಬದಿಗೆ ಲಕ್ವಾ ಹೊಡೆಸಿಕೊಂಡು ಮಾತುಬಾರದೆ ಕಂಡ ಕಂಡದ್ದಕ್ಕೆಲ್ಲಾ ಕಣ್ಣೀರು ಹಾಕುತ್ತಾ ಕಾಲೆಳೆಯುತ್ತಾ ಮೈಸೂರಿನ ಚೆಲುವಾಂಬಾ ಉದ್ಯಾನವನದಲ್ಲಿ ಓಡಾಡುತ್ತಿರುತ್ತಾರೆ. ಯಾರನ್ನು ನೋಡಿದರೂ ಅವರಿಗೆ ಅಳು ಬರುತ್ತದೆ. ಮಾತು ಬರುವುದಿಲ್ಲ. ಆತ ಉದ್ಯಾನವನದ ಲತಾಮಂಟಪದಲ್ಲಿ ಕಣ್ಣೀರು ಹಾಕುತ್ತಾ, ಸಿದ್ದಮ್ಮ ಎಲ್ಲರ ಮನೆ ಕೆಲಸ ಮುಗಿಸ ಬರುವವರೆಗೆ ಕಾದಿದ್ದು ನಂತರ ಆಕೆಯನ್ನು ಹಿಂಬಾಲಿಸಿಕೊಂಡು ಒಂಟಿಕೊಪ್ಪಲಿನ ತನ್ನ ಒಂದು ರೂಮಿನ ಮನೆಯನ್ನು ಸೇರುತ್ತಾನೆ.</p>
<p align="left">ಆ ಒಂದು ರೂಮಿನ ಮನೆ ಒಂದುಕಾಲದಲ್ಲಿ ಗಂದದ ಕಡ್ಡಿ ರಂಗಸ್ವಾಮಿಯ ದೊಡ್ಡ ಆಸ್ತಿಯ ಒಂದು ಸಣ್ಣ ಭಾಗವಾಗಿತ್ತು. ಕೋಟರ್ು, ಕಛೇರಿ, ದಾಯಾದಿ ವೈಮನಸ್ಸು, ಸಾಲ ಇತ್ಯಾದಿಗಳಿಂದ ಅದು ಕರಗಿ ರಂಗಸ್ವಾಮಿ ಮತ್ತು ಸಿದ್ದಮ್ಮನ ದೊಡ್ಡ ಸಂಸಾರ ಈಗ ಈ ಒಂದು ಸಣ್ಣ ಕೋಣೆಯಲ್ಲಿದೆ. ಮದುವೆಯಾಗಿ ಹೋದ ನಾಲಕ್ಕು ಹೆಣ್ಣು ಮಕ್ಕಳಲ್ಲಿ ಬಹುತೇಕ ಹೆಣ್ಣುಮಕ್ಕಳು ಗಂಡಂದಿರ ಕಷ್ಟ ಸಹಿಸಲಾರದೆ ಇಲ್ಲೇ ಬಂದಿದ್ದಾರೆ. ಗಂಡು ಮಕ್ಕಳೂ ಬಹುತೇಕ ಮಂದಿ ಹೀಗೇ ಬಂದಿದ್ದಾರೆ. ಸಿದ್ದಮ್ಮ ಮನೆ ಕೆಲಸ ಮಾಡಿದ ಹಣದಲ್ಲಿ ಇವರೆಲ್ಲಾ ಬದುಕ ಬೇಕಾಗಿದೆ. ಇದನ್ನೆಲ್ಲಾ ಯೋಚಿಸಿಕೊಂಡು ಮಾತು ಹೊರಟು ಹೋಗಿರುವ ರಂಗಸ್ವಾಮಿ ಅಳುವಿನಲ್ಲೇ ಎಲ್ಲವನ್ನು ವ್ಯಕ್ತ ಪಡಿಸುತ್ತಿರುತ್ತಾರೆ.</p>
<p align="left">ಸಿದ್ದಮ್ಮ ಹುಟ್ಟಿದ್ದು ಮಂಡ್ಯದ ಬಳಿಯ ನಾಗಮಂಗಲದಲ್ಲಿ. ಮೂರು ವರ್ಷಕ್ಕೆ ತಾಯಿ ತೀರಿ ಹೋಗುತ್ತಾರೆ. ಸಿದ್ದಮ್ಮನ ತಾಯಿ ಸಿದ್ದಮ್ಮನ ತಂದೆಯ ಎರಡನೇ ಹೆಂಡತಿ. ಆ ಹೆಂಡತಿ ಸಿದ್ದಮ್ಮನ ತಾಯಿಯ ಅಕ್ಕ. ಆಕೆಗೂ ಒಬ್ಬಳು ಮಗಳು ಆ ಇಬ್ಬರು ಹೆಂಡತಿಯರೂ ಗಂಡನೂ ಕಾಲರಾ ಬಂದು ತೀರಿಹೋದ ಮೇಲೆ ಉಳಿದ ಅಕ್ಕ ಸಿದ್ದಮ್ಮನನ್ನು ಸಾಕಿ ಶಾಲೆಗೆ ಕಳಿಸಿದ್ದಾರೆ. ಆ ಶಾಲೆಯಲ್ಲಿ ಸದಾ ತೂಕಡಿಸುವ ಒಬ್ಬ ಉಪಾದ್ಯಾಯ. ಆತನ ತೂಕಡಿಕೆ ತಾಳಲಾರದೆ ಸಿದ್ದಮ್ಮ ಶಾಲೆಗೆ ಹೋಗದೆ ನಾಗಮಂಗಲದ ಕೇಶವ ದೇವಸ್ಥಾನದ ಅಂಗಳದಲ್ಲಿ ಲಗೋರಿ ಆಡುತ್ತಾ ಪುರಿ ತಿನ್ನುತ್ತಾ ಸಾಬರ ಹುಡುಗರ ಜೊತೆ, ಬೆಸ್ತರ ಹುಡುಗಿಯರ ಜೊತೆ ಕುಂಟಾಬಿಲ್ಲೆ ಆಡುತ್ತಾ ದೊಡ್ಡವಳಾಗಿದ್ದಾಳೆ. ಹನ್ನೊಂದನೆಯ ವಯಸ್ಸಿನಲ್ಲಿ ಮದುವೆಯೂ ಆಗಿದೆ.<br />
ಆಮೇಲೆ ಎಂಟು ಮಕ್ಕಳು ಆಗಿದ್ದಾರೆ. ಮನೆಕೆಲಸ ಶುರುಮಾಡಿ 30 ವರ್ಷಗಳಾಗಿವೆ. ಸಿದ್ದಮ್ಮನ ವಿಶೇಷತೆ ಏನೆಂದರೆ ಆಕೆ ಮಕ್ಕಳನ್ನು ಬಲು ಚೆನ್ನಾಗಿ ನಿದ್ದೆ ಮಾಡಿಸುತ್ತಾಳೆ. ಆಕೆ ನಿದ್ದೆ ಮಾಡಿಸಿ ಬೆಳೆಸಿದ ಹತ್ತಾರು ಮಕ್ಕಳು ಈಗ ದೊಡ್ಡವರಾಗಿ ಅದರಲ್ಲಿ ಕೆಲವರು ಮಾಹಿತಿ ತಂತ್ರಜ್ಞರೂ, ಕಲಾವಿದರೂ, ಕವಿಗಳೂ ಆಗಿದ್ದಾರೆ. ನನ್ನ ಮಗ ದೊಡ್ಡ ಸ್ಪೆಲ್ಲಿಂಗ್ ತಜ್ಞನಾಗುವ ಗುಣ ಲಕ್ಷಣಗಳನ್ನು ಈಗಲೇ ತೋರಿಸುತ್ತಿದ್ದಾನೆ. ಸಿದ್ದಮ್ಮ ಅಷ್ಟು ದೊಡ್ಡ ಹಣೆ ಬೊಟ್ಟು ಇಟ್ಟುಕೊಂಡು ಮೂಗುತಿ ಧರಿಸಿಕೊಂಡು ನಿದ್ದೆಯಲ್ಲಿ ಕನವರಿಸುತ್ತಿದ್ದಾಳೆ. ಆಕೆ ಎಚ್ಚರಾದಾಗ ನೋಡಲಿ ಎಂಬ ಉದ್ದೇಶದಿಂದ ನಾನು ಡಾಕ್ಟರ್ ರಾಜಕುಮಾರ್ ನಟಿಸಿರುವ ಸಿನೆಮಾವೊಂದು ಬರುತ್ತಿರುವ ಟಿ.ವಿ. ಚಾನಲ್ ಆನ್ ಮಾಡಿ ಹೊರಟು ಬಂದ್ದಿದ್ದೇನೆ.</p>
<p align="left">ಸಿದ್ದಮ್ಮನಿಗೆ ಈಗ ಒಂದೇ ಒಂದು ಆಸೆ ಉಳಿದಿದೆ. ಯಾರೋ ಎರಡುರೂಪಾಯಿ ಬಡ್ಡಿದರದಲ್ಲಿ ನಲವತ್ತು ಸಾವಿರ ಸಾಲ ನೀಡುವೆ ಎಂದಿದ್ದಾರೆ. ಎರಡುರೂಪಾಯಿ ಬಡ್ಡಿಯ ಆ ಸಾಲವನ್ನು ತೆಗೆದುಕೊಂಡು- ನಾಲ್ಕು ರೂಪಾಯಿ  ಬಡ್ಡಿದರದಲ್ಲಿ ತೆಗೆದು ಕೊಂಡಿರುವ ಸಾಲ ತೀರಿಸಿ- ಅಡ ಇಟ್ಟಿರುವ ಮನೆಯ ಇನ್ನೊಂದು ಕೋಣೆಯನ್ನು ಬಿಡಿಸಿಕೊಂಡು- ಅದನ್ನು ಬಾಡಿಗೆಗೆ ಕೊಟ್ಟು- ಆ ಹಣದಲ್ಲಿ ಈ ಎರಡು ರೂಪಾಯಿ ಬಡ್ಡಿದರದ ಸಾಲವನ್ನು ತೀರಿಸಬೇಕು ಎಂಬುದು ಸಿದ್ದಮ್ಮನ ಇತ್ತೀಚಿನ ಯೋಚನೆ. ಅದಕ್ಕಾಗಿಯೇ ಇರಬೇಕು ನಿದ್ದೆಯಲ್ಲೂ ಅವಳ ಕೈ ಬೆರಳುಗಳು ಬಡ್ಡಿದರವನ್ನು ಲೆಕ್ಕ ಹಾಕುತ್ತಾ ಇರುತ್ತವೆ.</p>
<p align="left">ಮೊನ್ನೆ ಮೈಸೂರಿನ ಇನ್ ಫೋಸಿಸ್ ಗೆ ಭಾರತದ ಮಾನ್ಯ ರಾಷ್ಟ್ರಪತಿ ಅಬ್ದುಲ್ ಕಲಾಂ ಬಂದಿದ್ದರು. ಅಲ್ಲಿಗೆ ನಾನೂ ಹೋಗುತ್ತಿದ್ದೇನೆ ಎಂದು ಸಿದ್ದಮ್ಮನಿಗೆ ಯಾರೋ ಹೇಳಿದ್ದರು. '`ಅಯ್ಯೋ ರಾಷ್ಟ್ರಪತಿಗಳಿಗೆ ಹೇಳಿ ಇನ್ಪೋಸಿಸ್ನಲ್ಲಿ ನನ್ನ ಮೊಮ್ಮಗನಿಗೆ ಒಂದು ಕೆಲಸ ಕೊಡಿಸಿಬಿಡು ಮಗಾ, ನಿನಗೆ ಪುಣ್ಯ ಬರುತ್ತದೆ' ಎಂದು ಅಜ್ಜಿ ಬೇಡಿಕೊಳ್ಳುತ್ತಿದ್ದರು.<br />
ನಾನು ಏನು ಮಾಡುವುದು ಎಂದು ಗೊತ್ತಾಗದೆ ಸುಮ್ಮನಿದ್ದೆ. ಅದೂ ಅಲ್ಲದೆ ಇನ್ಪೋಸಿಸ್ಗೆ ಹೋಗುವುದು ನನ್ನ ಕಾರ್ಯಸೂಚಿಯಲ್ಲಿರಲಿಲ್ಲ. ನಾನು ಇನ್ನೊಂದು ಸಮಾರಂಭಕ್ಕೆ ಹೋಗ ಬೇಕಾಗಿತ್ತು. `<strong>ಜಾಗತೀಕರಣದ ಸವಾಲುಗಳು, ಧರ್ಮ, ಆಧ್ಯಾತ್ಮ ಹಾಗೂ ಶಿಕ್ಷಣ' </strong>ಎನ್ನುವ ರಾಷ್ಟ್ರೀಯ ವಿಚಾರ ಗೋಷ್ಟಿಯೊಂದನ್ನು ವರದಿ ಮಾಡಲು ನಾನು ಹೋಗಬೇಕಾಗಿತ್ತು. ಹಾಗಾಗಿ ಸಿದ್ದಮ್ಮನಿಗೆ  ಇದನ್ನು ಹೇಗೆ ಹೇಳವುದು ಗೊತ್ತಾಗಲಿಲ್ಲ.</p>
<p align="left">[ಈ ಬ್ಲಾಗಿನಲ್ಲಿ ಸಿದ್ದಮ್ಮನ ಚಿತ್ರಗಳು ಪ್ರಕಟವಾಗುತ್ತಿದೆ. ಗಾಣಿಗರ ಸಿದ್ದಮ್ಮನಿಂದ ನಿದ್ದೆ ಮಾಡಿಸಿಕೊಂಡು ಬೆಳೆದು ದೊಡ್ಡವರಾದ ಮಕ್ಕಳು ಯಾರಾದರೂ ಆಕೆಯನ್ನು ನೆನಪಿಸಿಕೊಂಡರೆ ಸಹಾಯ ಮಾಡಬಹುದಾಗಿದೆ.]</p>
]]></content:encoded>
</item>
<item>
<title><![CDATA[ತೇಜಸ್ವಿ ನನ್ನ  ಮೊಬೈಲ್ ನಂಬರ್ ಮರೆಯದಿರಲಿ ದೇವರೇ....]]></title>
<link>http://mysorepost.wordpress.com/2007/04/09/tejaswi-2/</link>
<pubDate>Mon, 09 Apr 2007 13:05:44 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/04/09/tejaswi-2/</guid>
<description><![CDATA[                      
                       [ವ್ಯಂಗ್ಯಚಿತ್ರ ಕೃಪೆ:ಗ]]></description>
<content:encoded><![CDATA[<p align="left">                      <img src="http://mysorepost.files.wordpress.com/2007/04/tejaswi.jpg" alt="tejaswi.jpg" style="width:549px;height:531px;" height="531" width="549" /></p>
<p align="center">                       [<em>ವ್ಯಂಗ್ಯಚಿತ್ರ ಕೃಪೆ:ಗುಜ್ಜಾರಪ್ಪ]</em></p>
<p align="center">&#160;</p>
<p align="left">                             ಗೊಂದಲಗೇರಿಯ ಕ್ಯಾಂಟೀನ್ ಹೋಟ್ಲಿನಿಂದ ಪಾರ್ಸಲ್ ತಂದ ಬಿರಿಯಾನಿ ತಿಂದು ಮುಗಿಸಿ ಕೈತೊಳೆದು ಮುಖ ನೋಡಿ ಕನ್ನಡಿಯಲ್ಲಿ ಯಾವುದೋ ಅಜ್ಞಾತ ಹಲ್ಲಿಯನ್ನು ಕಂಡ ತೇಜಸ್ವಿ ಅದರ ಜಾಡನ್ನು ಹಿಡಿದು ಈ ದೇಹವನ್ನು ಇಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ. ಬಹುಶಃ ಮರಳಿಬರುವುದಿಲ್ಲ. ಅವರ ಮಾಯಾಲೋಕದ ಮುಂದಿನ ಅಷ್ಟೂ ಭಾಗಗಳು ಬಹುಶಃ ಅಲ್ಲೇ ಪ್ರಕಟಗೊಂಡು ಮರು ಮುದ್ರಣಗೊಂಡು ಅಲ್ಲೇ ಶಾಲೆಗೆ ಹೋಗುವ ಹುಡುಗರಿಗೆ ಪಾಠ ಪುಸ್ತಕಗಳಾಗಿ ಅಲ್ಲಿನ ವಿಮರ್ಶಕರ ಕಠಿಣ ಹಲ್ಲುಗಳ ನಡುವೆ ಮೀನಿನ ಮುಳ್ಳುಗಳ ಹಾಗೆ ಸಿಲುಕಿಕೊಂಡು ಅದನ್ನು ಅವರು ತೆಗೆಯಲೂ ಆಗದೆ ಜಗಿಯಲೂ ಆಗದೆ ಯಾವ ಪರಿಭಾಷೆಗಳಿಂದ ಅದನ್ನು ನಿರ್ವಹಿಸುವುದು ಎಂಬ ಅರಿವಾಗದೆ ಅವರೆಲ್ಲರೂ ಅಲ್ಲಿ ಒಂದು ದೊಡ್ಡ ಹಾಹಾಕಾರದಲ್ಲಿ ಸಿಲುಕಿಕೊಂಡು ಬಿಡಲಿದ್ದಾರೆ.<!--more--></p>
<p align="left"> ತೇಜಸ್ವಿಯವರು ಹೋಗುವ ಎರಡು ದಿನ ಮೊದಲು ಮಂಗಳವಾರ ಬೆಳಿಗ್ಗೆ ನನ್ನ ಮೊಬೈಲ್ ತೆಗೆದುಕೊಂಡು ನಿನ್ನ ಜೊತೆ ಏನೋ ಮಾತಾಡಬೇಕು ಎಂದು ಮೆಲು ದನಿಯಲ್ಲಿ ಹೇಳಿದ್ದರು. ನಾನು ಆಯ್ತು ಎಂದು ಹೇಳಿ ತೇಜಸ್ವಿಯವರ ಮಡದಿ ಆರ್. ರಾಜೇಶ್ವರಿಯವರ ಜೊತೆ ರೇಡಿಯೋ ಸಂಭಾಷಣೆಯಲ್ಲಿ ತೊಡಗಿದ್ದೆ. ವಿಷಯ : ನಮ್ಮ ಯಜಮಾನರ ಕೈ ಅಡುಗೆಯ ಬಾಯಿ ರುಚಿ. ರಾಜೇಶ್ವರಿಯವರು ದೂರವಾಣಿಯಲ್ಲಿ ಮೂಡಿಗೆರೆ ಹ್ಯಾಂಡ್ಪೋಸ್ಟ್ನಿಂದ ತೇಜಸ್ವಿಯವರ ಬಿರಿಯಾನಿ ಮಾಡುವ ತಪಸ್ಸನ್ನು ಬಹಳ ಹೆಮ್ಮಯಿಂದ ಕೊಂಚ ಸಂಕೋಚದಿಂದ ಹಾಗೂ ಸಾಕಷ್ಟು ನಾಚಿಕೊಂಡು ಮಾತನಾಡುತ್ತಿದ್ದರು. ಅದು ಹೇಗೆ ತೇಜಸ್ವಿಯವರು ತಾವೇ ಮೂಡಿಗೆರೆ ಪೇಟೆಗೆ ಹೋಗಿ ಮಟನ್ ಕೊಂಡುಕೊಂಡು ಬಂದು ತೊಳೆದು ಕತ್ತರಿಸಿ ಮೇರಿನೇಟ್ ಮಾಡಿಟ್ಟುಕೊಂಡು ಅಡುಗೆ ಮನೆಯ ಬಾಗಿಲು ಓರೆ ಮಾಡಿಕೊಂಡು ಸ್ವರ್ಗ ಸದೃಶ ಬಿರಿಯಾನಿ ತಯಾರುಮಾಡುತ್ತಾರೆ ಎಂಬುದನ್ನು ವಿವರಿಸುತ್ತಿದ್ದರು.</p>
<p align="left">ಬಿರಿಯಾನಿ ಮಾಡುವ ಮೊದಲು ಅವರು ಹೇಗೆ ಅದಕ್ಕೆ ಬೇಕಾದ ಎಲ್ಲ ಪರಿಕರಗಳನ್ನೂ ಯಂತ್ರೋಪಕರಣಗಳನ್ನೂ ತತ್ವಜ್ಞಾನಿಯಂತೆ ಪರಿಶೀಲಿಸಿ ಮಿಕ್ಸಿಯ ಮಾಮೂಲು ಸದ್ದಿನಲ್ಲಿ ಏನಾದರೂ ಅಸಹಜತೆ ಕಂಡುಬಂದರೆ ಅದನ್ನು ಬಿಚ್ಚಿ ಸರಿಮಾಡಿಕೊಂಡು ಯಾರನ್ನೂ ಹತ್ತಿರ ಸೇರಿಸಿಕೊಳ್ಳದೆ ಬಿರಿಯಾನಿ ಯಾಗದಲ್ಲಿ ಮಗ್ನರಾಗುತ್ತಿದ್ದರು ಎಂದು ವಿವರಿಸುತ್ತಿದ್ದರು. ಅದಕ್ಕೆ ಬೇಕಾಗುವ ಬೆಳ್ಳುಳ್ಳಿ, ಅದಕ್ಕೆ ಬೇಕಾಗುವ ಶುಂಠಿ, ಅದಕ್ಕೆ ಬೇಕಾಗುವ ಗರಂ ಮಸಾಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದಕ್ಕೆ ಬೇಕಾಗುವ ಕಾದಂಬರಿಕಾರನ ಮನಸ್ಸು ಇವೆಲ್ಲವನ್ನೂ ಅವರು ಹೇಗೆ ಹೊಂದಿಸಿಕೊಳ್ಳುತ್ತಿದ್ದರು ಮತ್ತುಅವುಗಳು ಇಲ್ಲವಾದಾಗ ಹೇಗೆ ಸಿಡಿಮಿಡಿಗೊಳ್ಳುತ್ತಿದ್ದರು ಎಂಬುದನ್ನು ರಾಜೇಶ್ವರಿಯವರು ದೂರವಾಣಿಯಲ್ಲಿ ಮಲೆಗಳಲ್ಲಿ ಮದುಮಗಳ ಹಾಗೆ ವಿವರಿಸುತ್ತಿದ್ದರು. ಮೈಸೂರು ಆಕಾಶವಾಣಿಯ ಕೇಳುಗರು ಕನ್ನಡನಾಡಿನ ಮೇರುಸದೃಶ ಲೇಖಕನ ಅಡುಗೆಯ ಕೈಚಳಕವನ್ನು ತದೇಕಚಿತ್ತರಾಗಿ ಆಲಿಸುತ್ತಿದ್ದರು. ಬಹುಶಃ ತೇಜಸ್ವಿಯವರು ಹೆಂಡತಿಯ ಮಾತುಗಳನ್ನು ಹಿಂದಿನಿಂದ ಕೇಳಿಸಿಕೊಂಡು ನಗುತಿದ್ದರು.</p>
<p align="left">                'ಏನು ಮೇಡಂ ತೇಜಸ್ವಿಯವರು ಬಿರಿಯಾನಿ ಕರಿಯನಿಗಿಂತಲೂ ಮಿಗಿಲಾದ ಬಿರಿಯಾನಿ ಮಾಡುತ್ತಾರಾ?' ಎಂದು ಕೇಳಿದ್ದೆ. 'ಏನು ಮೇಡಂ ತೇಜಸ್ವಿಯವರ ಬಿರಿಯಾನಿಯಿಂದಾಗಿಯೇ ನೀವು ಅವರ ಪ್ರೇಮದಲ್ಲಿ ಸಿಲುಕಿಕೊಂಡಿರಾ' ಎಂದು ಚೇಷ್ಟೆ ಮಾಡಿದ್ದೆ. 'ಏನು ಮೇಡಂ ತೇಜಸ್ವಿಯವರು ಅಡುಗೆ ಮುಗಿಸಿದ ಮೇಲೆ ಅಡುಗೆ ಮನೆ ರಣರಂಗವಾಗಿ ಹೋಗುವುದಾ' ಎಂದೂ ಕೇಳಿದ್ದೆ. ಎಲ್ಲದಕ್ಕೂ ರಾಜೇಶ್ವರಿಯವರು ಎದೆ ತುಂಬಿ ವಿಶಾಲವಾಗಿ ನಗುತ್ತಾ ವಿವರಿಸುತ್ತಿದ್ದರು. ರೇಡಿಯೋದಲ್ಲಿ ನಮ್ಮ ಮಾತು ಮುಗಿದ ಮೇಲೆ ತೇಜಸ್ವಿಯವರು ಪೋನ್ ತೆಗೆದುಕೊಂಡು ಆಮೇಲೆ ಮಾತಾಡುತ್ತೇನೆ ಅಂದಿದ್ದರು. ಅವರು ಹಾಗೆ ಅಂದದ್ದು ನನಗೆ ಆಕಾಶ ನೋಡಿದಷ್ಟು ಖುಷಿಯಾಗಿ ಸ್ಟುಡಿಯೋದೊಳಗೇ ಹೆಮ್ಮೆಯಿಂದ ಬೀಗಿದ್ದೆ.</p>
<p align="left">                  ಈಗ ನೋಡಿದರೆ ನನ್ನ ಮನಸ್ಸನ್ನು ಕುರುಕ್ಷೇತ್ರದ ಕೊನೆಯ ದಿನದ ನಂತರದ ಬೆಳಗಿನ ರಣರಂಗವನ್ನಾಗಿ ಮಾಡಿ ಅವರು ಅಂತಜರ್ಾಲದ ಯಾವುದೋ ತಂತ್ರಾಂಶವನ್ನು ಹುಡುಕಿಕೊಂಡು ಕೈತೊಳೆದು ಮುಖನೋಡಿ ಕನ್ನಡಿಯೊಳಗೆ ಹೊರಟು ಹೋಗಿದ್ದಾರೆ. ಬಹುಶಃ ತೇಜಸ್ವಿಯಂತಹ ದೈತ್ಯನನ್ನು ಸಾಕುವುದು ಕನ್ನಡ ಸಾರಸ್ವತ ಲೋಕಕ್ಕೆ ಆಗುತ್ತಿಲ್ಲ. ಕೃಷ್ಣೇಗೌಡನ ಆನೆಯನ್ನೇ ಸರಿಯಾಗಿ ಅರ್ಥಮಾಡಿಕೊಳ್ಳಲಾಗದೆ, ಬಹಳಷ್ಟು ಅನರ್ಥಮಾಡಿಕೊಂಡ ಹುಲು ಓದುಗರಾದ ನಾವು. ತೇಜಸ್ವಿಯಂತಹ ಅಲೌಕಿಕ ಹಕ್ಕಿಯನ್ನು ಏನೇನೆಂದೆಲ್ಲಾ ಕರೆದು ಅನರ್ಥಮಾಡಿಕೊಂಡಿರಬಹುದು. ಅದಕ್ಕಾಗಿ ಅವರು ಯಾರದ್ದೇನೂ ಹರಿಯಕ್ಕಿಲ್ಲ ಯಾರದೇನೂ ಮುರಿಯಕ್ಕಿಲ್ಲ ಎಂದು ಕ್ಯಾರೇ ಮಾಡದೇ ಹೊರಟು ಹೋಗಿದ್ದಾರೆ.<br />
ನಾನೂ ಸುಮಾರು 25 ವರ್ಷಗಳ ಹಿಂದೆ ಬೇರೆಯದೇ ಒಬ್ಬರನ್ನು ತೇಜಸ್ವಿ ಎಂದು ಅನರ್ಥ ಮಾಡಿಕೊಂಡು ಅದರಿಂದಾದ ಅನಾಹುತದಿಂದಾಗಿ ಕನ್ನಡದ ಬರಹಗಾರರನಾಗಿ ಬಿಟ್ಟಿದ್ದೇನೆ. ಆ ದುರಂತದ ಪರಿಣಾಮವನ್ನು ಈಗಲೂ ತುಂಬ ಮಂದಿ ಅನುಭವಿಸುತ್ತಿದ್ದಾರೆ.</p>
<p align="left">                          ಅದು ಬಹುಶಃ 1982 ರಲ್ಲಿ ಇರಬೇಕು. ಆಗ ನಾವೆಲ್ಲರೂ ಕೊಡಗಿನ ಸಂಪಾಜೆ ಶಾಲೆಯಲ್ಲಿ ಓದುತ್ತಿದ್ದೆವು. ಆಗ ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಶಂ. ಬಾ. ಜೋಷಿ ಅಧ್ಯಕ್ಷರಾಗಿದ್ದರು. ಅದಕ್ಕೆ ಪರ್ಯಾಯವಾಗಿ ಬಂಡಾಯ  ಸಾಹಿತ್ಯ ಸಮ್ಮೇಳನವೂ ನಡೆದಿತ್ತು. ಆದರೆ ಅಲ್ಲಿ ಊಟದ ಟಿಕೆಟ್ ಇಲ್ಲದಿರುವುದರಿಂದ ನಾವು ಊಟದ ಟಿಕೆಟ್ಟು ಹುಡುಕಿಕೊಂಡು ಭಾಷಣಗಳ ನಡುವೆ ದಾರಿಮಾಡಿಕೊಂಡು ಕ.ಸಾ.ಪ.ಸಭಾಂಗಣದೊಳಕ್ಕೆ ತಿರುಗಾಡಿಕೊಂಡಿದ್ದೆವು. ಯಾರೋ ಒಬ್ಬರು ವಯಸ್ಸಾದ ಸಾಹಿತಿಗಳೊಬ್ಬರು ಊಟದ ಟಿಕೆಟು ಕೊಡಿಸುತ್ತೇವೆಂದು ನಮ್ಮನ್ನು ಅವರ ಕೋಣೆಗೆ ಕರೆದುಕೊಂಡು ಹೋಗಿ ನಮ್ಮೊಡನೆ ವಿಚಿತ್ರವಾಗಿ ವರ್ತಿಸಿದ್ದರು. ಅವರು ನೋಡಲು ಆಕರ್ಷಕವಾಗಿಯೂ ಇರಲಿಲ್ಲ.</p>
<p align="left">                    ನಾವು ಹೆದರಿಕೊಂಡು ಅಲ್ಲಿಂದ ಪರಾರಿಯಾಗಿ ಕೆಂಪು ಬಸ್ಸೊಂದನ್ನು ಹತ್ತಿ ಮಡಿಕೇರಿಯಿಂದ ಬಸ್ಸಿನಲ್ಲಿ ನೇತಾಡುತ್ತಾ ಸಂಪಾಜೆ ಘಾಟಿಯನ್ನು ಇಳಿಯುತ್ತಿದ್ದೆವು.  ಸಾಹಿತ್ಯ ಸಮ್ಮೇಳನದಲ್ಲಿ ತೇಜಸ್ವಿಯವರು ಇರುತ್ತಾರಾ ಎಂದು ಹುಡುಕಿ ನಾನು ನಿರಾಶೆಗೊಂಡಿದ್ದೆ. ತೇಜಸ್ವಿಯವರ ನಿಗೂಢ ಮನುಷ್ಯರು ಕಾದಂಬರಿಯನ್ನು ಓದಿ ನಾನು ಆಗಲೇ ಸಾಕಷ್ಟು ಹೆದರಿಕೆಗಳನ್ನೂ ಅನುಭವಿಸಿದ್ದೆ.</p>
<p align="left">                ಸಾಹಿತ್ಯ ಸಮ್ಮೇಳನದಲ್ಲಿ ತೇಜಸ್ವಿಯವರನ್ನು ಕಾಣದ ನನಗೆ ಬಸ್ಸಿನ ಮುಂದಿನ ಸೀಟಿನಲ್ಲಿ ಅಕಸ್ಮಾತ್ತಾಗಿ ತೇಜಸ್ವಿಯವರು ಮರೀಚಿಕೆಯಂತೆ ಕಾಣಿಸಿಕೊಂಡಿದ್ದರು. ಅವರು ಡ್ರೈವರನ ಹಿಂದೆ, ಮುಂದಿನ ಸೀಟಿನ ಮೂಲೆಯಲ್ಲಿ ಕಾಲಮೇಲೆ ಕಾಲು ಹಾಕಿಕೊಂಡು ಯಾವುದೋ ದಪ್ಪದ ಪುಸ್ತಕವನ್ನು ಓದುತ್ತಿದ್ದರು. ನೋಡಲು ಅವರು ತೇಜಸ್ವಿಯವರ ಹಾಗೇ ಕಾಣಿಸುತ್ತಿದ್ದರು. ಹೆದರಿಕೊಂಡೇ `ಸರ್ ನೀವು ತೇಜಸ್ವಿಯವರಾ' ಎಂದು ಕೇಳಿದ್ದೆ. 'ಇಲ್ಲ ಏನು ಬೇಕಾಗಿತ್ತು' ಎಂದು ಕೊಂಚ ಸರಿದು ಕೂರಲು ಜಾಗಕೊಟ್ಟಿದ್ದರು. `ನೀವು ತೇಜಸ್ವಿ ಅಲ್ಲವಾ' ಎಂದು ಮುಖವನ್ನು ನಿರಾಶೆ ಮಾಡಿಕೊಂಡಿದ್ದೆ `ಅಲ್ಲ ಮಗೂ ಆದರೂ ನಿನಗೆ ಏನು ಬೇಕಾಗಿತ್ತು' ಎಂದು ಕೇಳಿದ್ದರು. 'ಏನೂ ಇಲ್ಲ ನಾನು ಕನ್ನಡದಲ್ಲಿ ಕವಿತೆ ಬರೀತಾ ಇದೀನಿ ಮುಂದೆ ಏನು ಮಾಡಬೇಕು ಗೊತ್ತಾಗ್ತಾ ಇಲ್ಲ' ಎಂದೆಲ್ಲಾ ತೊದಲಿದ್ದೆ.</p>
<p align="left">                 ಆ ಮಹಾನುಭಾವರು ನಮ್ಮ ಬಸ್ಸು ಸಂಪಾಜೆ ಗೇಟು ತಲುಪುವವರೆಗೆ ಸಾಹಿತ್ಯದ ಅನಂತ ಸಾಧ್ಯತೆಗಳನ್ನು ವಿವರಿಸಿದ್ದರು. ಕನ್ನಡದಲ್ಲಿ ಕವಿತೆ ಬರೆಯಲು ಏನೆಲ್ಲಾ ಮಾಡಬೇಕೆಂದೂ ವಯಸ್ಸಾದ ತಂದೆ ತಾಯಿಯರನ್ನೂ ತಮ್ಮ ತಂಗಿಯಂದಿರನ್ನು ಸಾಕಬೇಕಾದರೆ ಏನೆಲ್ಲಾ ಮಾಡಬೇಕೆಂದೂ ಎರಡೂ ಬೇಕಾದರೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಬೇಕೆಂದೂ ಬೆನ್ನುತಟ್ಟಿ ಬಸ್ಸು ಇಳಿಸಿದ್ದರು. ನಾನು ತೇಜಸ್ವಿ ಅಲ್ಲ ಅದಕ್ಕಾಗಿ ಸಾರಿ ಎಂದಿದ್ದರು.<br />
ಆ ಮಹಾನುಭಾವರ ಹೆಸರು ಪ್ರೊಪೆಸರ್ ಪಂಡಿತಾರಾದ್ಯ ಎಂದು. ಅವರು ಈಗ ಮೈಸೂರಿನಲ್ಲಿದ್ದಾರೆ.       ಅವರನ್ನು ಕಂಡಾಗಲೆಲ್ಲ ನಾನು ಮನಸ್ಸಿನಲ್ಲೇ ತೇಜಸ್ವಿಯವರನ್ನೂ ನೆನೆಯುತ್ತೇನೆ. ತೇಜಸ್ವಿಯವರ ದೆಸೆಯಿಂದಾಗಿ ನನ್ನ ಬದುಕಿನಲ್ಲಿ ಏನೇನೆಲ್ಲಾ ಆಯಿತು ಎಂದು ಕೊಳ್ಳುತ್ತೇನೆ.ನನ್ನ ಬಾಪಾನಂತೆಯೇ ಕಾಪಿ ತೋಟದ ರೈಟರಾಗಬೇಕಾಗಿದ್ದ ನಾನು ತೇಜಸ್ವಿಯವರ ದೆಸೆಯಿಂದಾಗಿ ಕನ್ನಡದ ರೈಟರಾಗಿ ಅಸಹಾಯಕತೆಯಿಂದ ಜೋಲು ಮುಖ ಹಾಕಿಕೊಂಡು ನಡೆಯುತ್ತಿರುವುದನ್ನು ನೆನೆದು ಒಂಥರಾ ಆನಂದವಾಗುತ್ತಿದೆ.</p>
<p align="left">
ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ತೇಜಸ್ವಿಯವರ ಸಾಹಿತ್ಯದ ಕುರಿತು ವಿಚಾರ ಸಂಕಿರಣವೊಂದು ನಡೆಯುತ್ತಿತ್ತು. ಪ್ರಾಂಜಲರಾದ ವಿದ್ವಾಂಸರುಗಳೂ ವಿಮರ್ಶಕರುಗಳೂ ಅಲ್ಲಿದ್ದರು. ನಾನೂ ಮಾತಾಡಬೇಕಿತ್ತು ತೇಜಸ್ವಿಯವರ ಮಾಯಾಲೋಕದ ಕುರಿತು ಕೆಲವು ಮೂಲಭೂತ ತಕರಾರುಗಳನ್ನು ನಾನು ಎತ್ತಬೇಕಿತ್ತು. ಹಾಗೇ ನೋಡಿದರೆ ಮಾಯಾಲೋಕದ ಕುರಿತು ಯಾವುದೇ ಮೂಲವಾಗಲೀ ಆದ ಭೂತವಾಗಲೀ ಆದ ತಕರಾರುಗಳು ನನಗಿರಲಿಲ್ಲ. ಮನಸ್ಸಿನ ತುಂಬ ಬಜ್ಜಿ ಮಾಡಿ ಮಾರುವ ಬಜ್ಜಿ ಪಾತಿಮಾ ತುಂಬಿಕೊಂಡಿದ್ದಳು. ತೇಜಸ್ವಿ ಅಂತ ನಾನು ಪಂಡಿತಾರಾದ್ಯರನ್ನು ತಪ್ಪು ತಿಳಿಕೊಂಡ ದೆಸೆಯಿಂದಾಗಿ ಕಾಪಿತೋಟದ ರೈಟರಾಗಬೇಕಾಗಿದ್ದ ನಾನು ಕನ್ನಡದ ರೈಟರಾದ ಕುಚೇಷ್ಟೆಯನ್ನು ಯೋಚಿಸಿ ನಗುಬರುತ್ತಿತ್ತು. ತೋಟದ ಸಾಹುಕಾರರೇನಾದರು ಸಿಟ್ಟುಮಾಡಿಕೊಂಡು ನನ್ನನ್ನು ಹೊರಹಾಕಿದ್ದರೆ ನಾನೂ ಸುಂಟಿಕೊಪ್ಪ ಸಂತೆಯಲ್ಲಿ ಬಜ್ಜಿ ಮಾರಿಕೊಂಡಿರುತ್ತಿದ್ದೆ ಎಂದು ಖುಷಿಯಾಗುತ್ತಿತ್ತು.</p>
<p align="left">'ಅಲ್ಲ ಮಹಾರಾಯರೇ, ತೇಜಸ್ವಿಯವರ ಮೂಲ ದ್ರವ್ಯವೇ ಒಂದು ಪಕ್ಷಿ ಇನ್ನೊಂದು ಪಕ್ಷಿಯನ್ನು ಅನರ್ಥ ಮಾಡಿಕೊಳ್ಳುವುದರಿಂದ ಆಗುವ ಅನಾಹುತಗಳ ಕುರಿತು ಇದೆ. ಬಿರಿಯಾನಿ ಕರಿಯನನ್ನು ಹಾವುಗೊಲ್ಲರ ನಾಗನೂ ಕರ್ವಾಲೋ ಸಾಹೇಬರನ್ನು ಊರವರೂ, ಭಿಕ್ಷುಕನನ್ನು ಹುಚ್ಚನೂ, ಓತಿಯನ್ನು ಕಿವಿ ಎಂಬ ನಾಯಿಯೂ, ಪ್ಯಾರನನ್ನು ಲೇಖಕರೂ - ಹೀಗೆ ಪ್ರತಿಯೊಬ್ಬರನ್ನೂ ಇನ್ನೊಬ್ಬರು ಅನರ್ಥಮಾಡಿಕೊಂಡು ಆಗುವ ಅನಾಹುತಗಳನ್ನು ತೇಜಸ್ವಿಯವರು ನಮಗೆ ಹೇಳಿದ್ದಾರೆ. ನಾವಾದರೋ ಅವರನ್ನು ಎಲ್ಲರೂ ಸೇರಿ ಅನಾಮತ್ತಾಗಿ ಅನರ್ಥಮಾಡಿಕೊಂಡು ರಾದ್ದಾಂತ ಮಾಡುತ್ತಿದ್ದೇವೆ ಎಂದು ಮಾತುಮುಗಿಸಿದ್ದೆ.</p>
<p align="left">ಈಗ ನೋಡಿದರೆ ತೇಜಸ್ವಿಯವರು ನನ್ನ ಮೊಬೈಲ್ ನಂಬರು ಕೇಳಿ ಪಡೆದು ಏನನ್ನೂ ಹೇಳದೆ ಹೊರಟು ಹೋಗಿದ್ದಾರೆ. ಹೀಗೆಲ್ಲಾ ಬರೆದದ್ದಕ್ಕೆ ನನ್ನನ್ನು ಅವರು ಫೋನಿನಲ್ಲಿ ತರಾಟೆಗೆ ತೆಗೆದುಕೊಳ್ಳಲಿ ಎಂದು ಕಾಯುತ್ತಿದ್ದೇನೆ. ನನ್ನ ದೂರವಾಣಿ ಸಂಖ್ಯೆ ಅವರಿಗೆ ಮರೆತು ಹೋಗದಿರಲಿ ದೇವರೇ, ದೇವರಾದರೂ ಅದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಾಕು ದೇವರೇ ಎಂದು ಪ್ರಾರ್ಥಿಸುತ್ತಿದ್ದೇನೆ.</p>
]]></content:encoded>
</item>
<item>
<title><![CDATA[ಮನಸ್ಸಿನಲ್ಲೇ ಮಹಾದೇವ]]></title>
<link>http://mysorepost.wordpress.com/2007/04/02/%e0%b2%ae%e0%b2%a8%e0%b2%b8%e0%b3%8d%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b3%87-%e0%b2%ae%e0%b2%b9%e0%b2%be%e0%b2%a6%e0%b3%87%e0%b2%b5/</link>
<pubDate>Mon, 02 Apr 2007 18:16:17 +0000</pubDate>
<dc:creator>Rasheed</dc:creator>
<guid>http://mysorepost.wordpress.com/2007/04/02/%e0%b2%ae%e0%b2%a8%e0%b2%b8%e0%b3%8d%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b3%87-%e0%b2%ae%e0%b2%b9%e0%b2%be%e0%b2%a6%e0%b3%87%e0%b2%b5/</guid>
<description><![CDATA[ 

[photo:Nethraraju]
ಕನ್ನಡನಾಡಿನ ಎಲ್ಲೋ ಒಂದುಕಡೆ ಒಂ]]></description>
<content:encoded><![CDATA[<p align="left"> </p>
<p align="left"><strong><img src="http://mysorepost.files.wordpress.com/2007/04/mahadeva.jpg" width="303" height="479" alt="mahadeva.jpg" /><strike></strike></strong></p>
<p align="left"><span style="font-weight:bold;" class="Apple-style-span">[photo:Nethraraju]</span></p>
<p align="left"><strong><font size="6">ಕ</font></strong>ನ್ನಡನಾಡಿನ ಎಲ್ಲೋ ಒಂದುಕಡೆ ಒಂದು ಕಲ್ಲಿನ ದೇವಾಯವಿದೆಯಂತೆ. ಆ ದೇವಾಲಯದ ಯಾವ ಕಲ್ಲನ್ನು ಮೊಟಕಿದರೂ ಅದರಿಂದ ಸಂಗೀತ ಹೊರಹೊಮ್ಮವುದಂತೆ. ಅದೇ ರೀತಿ ಮೈಸೂರಿನ ಹಳೆಯ ಕಾಲದ ಯಾರನ್ನು ಮಾತನಾಡಿಸಿದರೂ ಅವರಿಂದ ಮಹಾರಾಜರ ಕಥೆಗಳೇ ಹೊರ ಬರುವುದಂತೆ. ಇನ್ನೂ ಸ್ವಲ್ಪ ಕಡಿಮೆ ಹಳಬರನ್ನು ಮಾತನಾಡಿಸಿದರೆ ಅವರಿಂದ ಕುವೆಂಪು ಅವರ ಹೆಸರೇ ಬರುವುದಂತೆ.</p>
<p align="left">`ಇವರಿಬ್ಬರ ಗುಂಗಿನಿಂದ ಹೊರಬಂದು ಬರೆಯುವುದೆಂದರೆ ಮೈಸೂರಿನಲ್ಲಿ ಹರಸಾಹಸದ ಕೆಲಸವೇ ಸರಿ. ಹಾಗಾಗಿ ನೀನು ಯಾಕೆ ಸ್ವಲ್ಪ ನಮ್ಮ ದೇವನೂರು ಮಹಾದೇವರನ್ನು ಮಾತನಾಡಿಸಿ ಬರೆಯಬಾರದು ಎಂದು ಗೆಳೆಯರೊಬ್ಬರು ಕೊಂಚ ಕಳಕಳಿಯಿಂದಲೇ ನನಗೊಂದು ಉಚಿತ ಐಡಿಯಾ ಕೊಟ್ಟಿದ್ದರು.<!--more--></p>
<p align="left">ಅವರು ಹೇಳಿದ ಉಪಾಯವೂ ಬಹಳ ಹರ ಸಾಹಸದ ಕೆಲಸವೆಂದು ನನಗೆ ಅನ್ನಿಸುತ್ತಿತ್ತು. ಯಾಕೆಂದರೆ ನೋಡಿದಾಗಲೆಲ್ಲ ಈ ಭೂಲೋಕದ ನಾನಾ ನೋವುಗಳನ್ನೂ, ಸಾಮಾಜಿಕ ಸ್ಥಿತ್ಯಂತರಗಳನ್ನೂ ಬೇರೆ ಬೇರೆ ಕೋನಗಳಲ್ಲಿ ಚಿಂತಿಸಿಕೊಂಡು ಕೂತಿರುತ್ತಿದ್ದ ದೇವನೂರು ಒಂದು ಸಣ್ಣ ಪ್ರಶ್ನೆಗೂ ಉತ್ತರ ಹೇಳಲು ಬಹಳ ಕಾಲವನ್ನು ತೆಗೆದುಕೊಂಡು ಅವರ ಯೋಚನಾ ಖಂಡಗಳ ನಡುವಿನ ಮೌನವನ್ನು ಹೇಗೆ ತುಂಬಿಸುವುದು ಎಂದು ನನಗೆ ಯೋಚನೆ ಶುರುವಾಗುತ್ತಿತ್ತು. ಮಹಾದೇವ ಅವರು ರಾಜ್ಯಮಟ್ಟದ ಪ್ರಾದೇಶಿಕ ಪಕ್ಷವೊಂದರ ಅಧ್ಯಕ್ಷರೂ ಆಗಿರುವುದರಿಂದ ಅವರು ಬಹುತೇಕ ಕಾಲ ಚಿಂತಿಸುವುದರಲ್ಲೂ, ಏನು ಭಾಷಣ ಮಾಡುವುದೆಂದು ಯೋಚಿಸುವುದರಲ್ಲೂ ಹಾಗೂ ಪಕ್ಷದ ಕಾರ್ಯಕರ್ತರು ಹೊರತರುವ ಭಿತ್ತಿಪತ್ರ, ಕರಪತ್ರ, ಪ್ರಣಾಳಿಕೆ ಇತ್ಯಾದಿಗಳ ಕರಡುಪ್ರತಿಗಳನ್ನು ಸರಿಪಡಿಸುವುದರಲ್ಲೂ ವ್ಯಯವಾಗುತ್ತಿತ್ತು. ಹಾಗಾಗಿ ಅವರನ್ನು ನಾನು ಮಾತನಾಡಿಸಲು ಹೋದರೆ ಅವರ ಕಾಲ ನನ್ನ ಕೀಟಲೆಯ ಪ್ರಶ್ನೆಗಳಿಗೆ ಉತ್ತರ ಹೇಳುವುದರಲ್ಲಿ ಕಳೆದು ಹೋಗಬಾರದು ಎಂಬ ಹೆದರಿಕೆಯೂ ನನಗಿತ್ತು.</p>
<p align="left">ಆದರೂ ಧೈರ್ಯಮಾಡಿ ಒಂದುದಿನ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಅವರಿಗೆ ಪೋನ್ ಮಾಡಿ 'ಮಾದೇವ ಮಾಮ. ಈವತ್ತು ಸಾಯಂಕಾಲ ಕುಕ್ಕರಹಳ್ಳಿ ಕೆರೆದಂಡೆಯಲ್ಲಿ ವಾಕ್ ಹೋಗೋಣವಾ' ಎಂದು ಕೇಳಿ ಬಿಟ್ಟೆ. ನನ್ನ ಪ್ರಶ್ನೆಯ ಹಿಂದೆ ಯಾವುದೋ ತುಂಟ ಹುನ್ನಾರವಿರುವುದನ್ನು ಆ ಮಾತಿನಲ್ಲಿದ್ದ `ಮಾಮ' ಎಂಬ ಪದದ ಪರಿಮಳದಿಂದಲೇ ಮನಗಂಡ ಮಾದೇವ `ಯಾಕೆ? ಏನು ಸಮಾಚಾರ?' ಎಂದು ನಯವಾಗಿ ಗದರಿಸಿದರು. ಮಹಾದೇವ `ಏನು ಸಮಾಚಾರ?' ಎಂದರೆ ಮೈಸೂರಿನ ಕಾಲು ಭಾಗ ಲೇಖಕರು, ಬರಹಗಾರರು, ಬುದ್ಧಿಜೀವಿಗಳು ಹೆದರಿಬಿಡುತ್ತಾರೆ. ನಾನೂ ಹಾಗೆ ಹೆದರಿದಂತೆ ನಟಿಸಿ `ಇಲ್ಲ ಮಾಮ ಈ ವಾರದ ಲೇಖನ ಬರೆಯಲು ನೀವೇ ನನಗೆ ಕಥಾನಾಯಕ. ನೀವೇ ನನ್ನನ್ನು ಕಾಪಾಡಬೇಕು, ಮಹಾರಾಜರ ಕಥೆಗಳನ್ನೂ, ಮಹಾಕವಿಗಳ ಕಥೆಗಳನ್ನೂ ಕೇಳಿ ಓದುಗರು ಬೋರ್ ಹೊಡೆಸಿಕೊಂಡಿದ್ದಾರೆ' ಎಂದು ಹೇಳಿದೆ.</p>
<p align="left">'ನಾನು ಬೋರ್ ಹೊಡೆಸುವುದಿಲ್ಲ ಎಂದು ಏನು ಗ್ಯಾರಂಟಿ' ಎಂದು ಕೇಳಿದರು.</p>
<p align="left">'ಇಲ್ಲ ಮಾಮ ಬನ್ನಿ ವಾಕ್ ಹೋಗುವಾ. ನೀವು ಮಾತನಾಡದಿದ್ದರು ಪರವಾಗಿಲ್ಲ, ನಾನು ಹೇಗೋ ನಿಮ್ಮ ಮೌನವನ್ನೇ ಊಹಿಸಿಕೊಂಡು ಬರೆದು ಬಿಡುತ್ತೇನೆ' ಎಂದೆ.</p>
<p align="left"> </p>
<p align="left">'ಹಾಗಾದರೆ ಒಂದು ಉಪಾಯ. ನಾನು ಬರುವುದಿಲ್ಲ. ನಾನು ಜೊತೆಯಲ್ಲಿ ನಡೆಯುತ